ಬೆಂಗಳೂರು: ವೆಸ್ಟ್ ಇಂಡೀಸ್ ‘ಎ’ ಎದುರಿನ ಕ್ರಿಕೆಟ್ ಸರಣಿಯಲ್ಲಿ ಭಾರತವೇ ಗೆಲುವು ಪಡೆಯುವ ನೆಚ್ಚಿನ ತಂಡ ಭಾರತ ತಂಡದ ಕೋಚ್ ಲಾಲ್ಚಂದ್ ರಜಪೂತ್ ಹೇಳಿದ್ದಾರೆ.
‘ನಮ್ಮ ತಂಡ ಅತ್ಯುತ್ತಮ ಮಧ್ಯಮ ವೇಗಿಗಳು ಮತ್ತು ಸ್ಪಿನ್ನರ್ಗಳನ್ನು ಹೊಂದಿದೆ. ಜೊತೆಗೆ ಸ್ಫೂರ್ತಿ ತುಂಬಬಲ್ಲ ನಾಯಕ ಯುವರಾಜ್ ನಮ್ಮ ತಂಡದ ದೊಡ್ಡ ಶಕ್ತಿ. ಅವರು ಮರಳಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ಈ ಸರಣಿ ಅತ್ಯುತ್ತಮ ಅವಕಾಶ’ ಎಂದು ಮುಂಬೈ ತಂಡದ ಮಾಜಿ ಆಟಗಾರ ಲಾಲ್ಚಂದ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
‘ಯುವರಾಜ್ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಅವರು ಸಾಕಷ್ಟು ಕಷ್ಟ ಎದುರಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಉತ್ತಮ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿನ ತಂಡ ಉತ್ತಮ ಪ್ರದರ್ಶನ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಸರಣಿ ಗೆಲ್ಲುವ ಗುರಿಯೊಂದಿಗೆ ಇಲ್ಲಿಗೆ ಬಂದಿದ್ದೇವೆ. ಯುವ ಆಟಗಾರರು ಇನ್ನಷ್ಟು ಕಲಿಯಲು ಇಲ್ಲಿ ಅನುಕೂಲವಾಗಲಿದೆ’ ಎಂದು ವಿಂಡೀಸ್ ತಂಡದ ನಾಯಕ ಕೀರನ್ ಪೊವೆಲ್ ನುಡಿದರು.