ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರ ಬಡತನ ಪ್ರಮಾಣ ಇಳಿಕೆ

Last Updated 20 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ  ಬಡತನ  ಪ್ರಮಾಣ 2009-10ನೇ ಸಾಲಿನಲ್ಲಿ  ಶೇ 37.2ರಿಂದ ಶೇ 32ಕ್ಕೆ ಇಳಿದಿದೆ ಎಂದು ಯೋಜನಾ ಆಯೋಗ ಅಂದಾಜಿಸಿದೆ. ದೇಶದಲ್ಲಿರುವ ಬಡವರ ಸಂಖ್ಯೆಯನ್ನು ಗಣಕೀಕರಣಗೊಳಿಸಲು ‘ತೆಂಡೂಲ್ಕರ್’ ಸಮಿತಿ ಸಲಹೆ ನೀಡಿರುವ ಸೂತ್ರವನ್ನು ಆಧರಿಸಿ ಈ ಅಂಕಿ ಅಂಶಗಳನ್ನು ಯೋಜನಾ ಆಯೋಗ ಅಂದಾಜಿಸಿದೆ.‘2004-05ರಲ್ಲಿ ಶೇ 37ರಷ್ಟಿದ್ದ ದೇಶದ ಬಡತನ 2009-10ನೇ ಸಾಲಿನಲ್ಲಿ ಶೇ 32ಕ್ಕೆ ಇಳಿದಿದೆ. ಸದ್ಯ ನಮ್ಮ ಬಳಿ ಲಭ್ಯವಿರುವ ಪ್ರಾಥಮಿಕ ಅಂಕಿ ಅಂಶಗಳಿಂದ ಇದನ್ನು ಅಂದಾಜಿಸಲಾಗಿದೆ’ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ  ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆಹಾರ ಪದಾರ್ಥಗಳ ‘ಕ್ಯಾಲೊರಿ’ ಲೆಕ್ಕಾಚಾರದ ಬದಲಿಗೆ ಜೀವನ ವೆಚ್ಚದ ಸೂಚ್ಯಂಕದ ಮೇಲೆ ‘ಉಪಭೋಗ’ ಆಧರಿಸಿ ಬಡತನ ಅಂದಾಜಿಸಬೇಕು ಎಂದು ‘ತೆಂಡೂಲ್ಕರ್ ಸಮಿತಿ ಸಲಹೆ ನೀಡಿದೆ. ಆಹಾರದ ಜತೆಗೆ ಆರೋಗ್ಯ ಮತ್ತು ಶಿಕ್ಷಣ ಕೂಡ ಬಡತನ ಅಂದಾಜಿಸುವಲ್ಲಿ ಪ್ರಮುಖ ಸಂಗತಿಗಳು ಎಂದೂ ಸಮಿತಿ ಹೇಳಿದೆ.

 ‘ತೆಂಡೂಲ್ಕರ್ ಸಮಿತಿ’ ಸಲಹೆ ಮಾಡಿರುವ ಹೊಸ ಬಡತನ ರೇಖೆ ಶ್ರೀಮಂತ ಮತ್ತು ಬಡ ರಾಜ್ಯಗಳಲ್ಲಿ ವ್ಯತ್ಯಾಸ ಹೊಂದಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲೂ ಭಿನ್ನವಾಗಿದೆ.‘ಆದಾಗ್ಯೂ, ಈಗ ಬಿಡುಗಡೆ ಮಾಡಿರುವುದು ಪ್ರಾಥಮಿಕ ಅಂಕಿ ಅಂಶಗಳು’ ಎಂದು ಯೋಜನಾ ಆಯೋಗದ ಸದಸ್ಯ ಅಭಿಜಿತ್ ಸೇನ್ ಹೇಳಿದ್ದಾರೆ. ಆದರೆ, ಈ ಅಂಕಿ ಅಂಶಗಳಿಗೆ ತಾವು ಸಹಮತ ವ್ಯಕ್ತಪಡಿಸುವುದಾಗಿ  ಮೊಂಟೆಕ್ ಪ್ರತಿಕ್ರಿಯಿಸಿದ್ದಾರೆ.

ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಮುಂದಿನ ಹಂತವನ್ನು  2011-12ನೇ ಸಾಲಿನಲ್ಲಿ ಜಾರಿಗೊಳಿಸಲಾಗುವುದು. ಎರಡನೇ ಮಾದರಿ ಸಮೀಕ್ಷೆಯ ಅಂಕಿ ಅಂಶಗಳು 2013ರಲ್ಲಿ ಲಭಿಸುತ್ತವೆ. ಆಗ, 11ನೇ ಪಂಚವಾರ್ಷಿಕ ಯೋಜನೆಯ ಆರ್ಥಿಕ ಸೇರ್ಪಡೆಯ ನೈಜ ಫಲಿತಾಂಶಗಳು ಲಭಿಸುತ್ತವೆ ಎಂದು ಮೊಂಟೆಕ್ ಹೇಳಿದರು. ‘2009-10’ನೇ ಸಾಲಿನ ನಿಖರವಾದ ಅಂಕಿ ಅಂಶಗಳು ಲಭಿಸಿದರೆ, ನಂತರ, ದೇಶದ ಬಡತನ ತಗ್ಗಿದೆಯೇ, ಇಲ್ಲವೇ ಎನ್ನುವುದನ್ನು ಅಂದಾಜಿಸಬಹುದು. ಆದರೆ, ಆಹಾರ ಭದ್ರತಾ ಮಸೂದೆಯ ಹಿನ್ನೆಲೆಯಲ್ಲಿ ಈ ಅಂದಾಜು ಅಂಕಿ ಅಂಶಗಳು ಮಹತ್ವದ್ದಾಗಿವೆ’ ಎಂದು ಯೋಜನಾ ಖಾತೆಯ ರಾಜ್ಯ ಸಚಿವ ಅಶ್ವನಿ ಕುಮಾರ್ ಹೇಳಿದ್ದಾರೆ. ‘ತೆಂಡೂಲ್ಕರ್ ಸಮಿತಿ ನಿರ್ದಿಷ್ಟ ವಿಧಾನದ ಮೂಲಕ ಬಡತನದ ಅಂಕಿ ಅಂಶಗಳನ್ನು ಸಿದ್ಧಪಡಿಸಿದೆ. ಇದನ್ನು ಯೋಜನಾ  ಆಯೋಗ ಒಪ್ಪಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT