ನವದೆಹಲಿ(ಪಿಟಿಐ): ಹಣಕಾಸು ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ಜಾಗತಿಕ ಆರ್ಥಿಕ ಹಿಂಜರಿತದಿಂದ ಮತ್ತೆ ‘ಉದ್ಯೋಗ ಭೀತಿ’ ಮೂಡಿದೆ. ಇಂತಹ ನಕಾರಾತ್ಮಕ ಬೆಳವಣಿಗೆಗಳಿಂದ ಭಾರತೀಯ ಉದ್ಯೋಗಿಗಳು ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ, ಅವರ ಆತ್ಮವಿಶ್ವಾಸವೂ ತಗ್ಗಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ‘ರೇಗಸ್’ ನಡೆಸಿದ ಸಮೀಕ್ಷೆ ತಿಳಿಸಿದೆ.
ಆರ್ಥಿಕ ಅಸ್ಥಿರತೆಯಿಂದ ಮತ್ತೆಲ್ಲಿ ಉದ್ಯೋಗ ಕಳೆದುಕೊಳ್ಳಬೇಕಾಗಿ ಬರುತ್ತದೆಯೋ ಎಂಬ ಭೀತಿಯೇ ಭಾರತೀಯರನ್ನು ಕಾಡುತ್ತಲೇ ಇದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 71ರಷ್ಟು ಉದ್ಯೋಗಿಗಳು ತಾವು ಉದ್ಯೋಗ ಭದ್ರತೆಗೆ ಸಂಬಂಧಿಸಿದ ಒತ್ತಡ ಎದುರಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ಈ ಅಧ್ಯಯನ ಹೇಳಿದೆ.
‘2008ರ ಮೊದಲು ಸುತ್ತಿನ ಜಾಗತಿಕ ಹಿಂಜರಿತದ ಭೀತಿ ಇನ್ನೂ ಅನೇಕರನ್ನು ಬಿಟ್ಟಿಲ್ಲ. ಹಲವು ಉದ್ಯೋಗಿಗಳು ಈಗಲೂ ‘ಉದ್ಯೋಗ ಅಭದ್ರತೆ’ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅನೇಕರಿಗೆ ಬೊಜ್ಜು, ಮಧುಮೇಹ, ಅಸ್ತಮಾ, ಅಸಿಡಿಟಿ ಸಮಸ್ಯೆಗಳು ಕಾಣಿಸಿಕೊಂಡಿವೆ’ ಎಂದೂ ‘ರೇಗಸ್’ ಗಮನಸೆಳೆದಿದೆ.
ಭಾರತವೂ ಸೇರಿದಂತೆ ಸುಮಾರು 90 ದೇಶಗಳ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಮೀಕ್ಷಾ ತಂಡ ಸಂದರ್ಶಿಸಿದೆ. ಇವರಲ್ಲಿ ಭಾರತೀಯರೇ ಹೆಚ್ಚು (ಉದ್ಯೋಗ ಕಳೆದುಕೊಳ್ಳುವ ಭೀತಿ) ಒತ್ತಡ ಅನುಭವಿಸುತ್ತಿದ್ದಾರೆ. ಶೇ 34ರಷ್ಟು ಭಾರತೀಯರು ತಮ್ಮ ಉದ್ಯೋಗ ಭದ್ರತೆಯ ಬಗ್ಗೆ ಯೋಚಿಸಿ ರಾತ್ರಿ ಸರಿಯಾಗಿ ನಿದ್ರೆಯನ್ನೂ ಮಾಡುತ್ತಿಲ್ಲವಂತೆ, ದಿನಬೆಳಗಾದರೆ ಪತ್ರಿಕೆಗಳಲ್ಲಿ ಉದ್ಯೋಗ ಮಾರುಕಟ್ಟೆ ಚೇತರಿಕೆ ಮತ್ತು ಆರ್ಥಿಕ ಪುನಶ್ಚೇತನದ ಬಗೆಗಿನ ಸುದ್ದಿ ಹುಡುಕುತ್ತಾರೆ ಹೀಗೆ ಕುತೂಹಲಕರ ಸಂಗತಿಗಳನ್ನೂ ಅಧ್ಯಯನ ಬಹಿರಂಗಗೊಳಿಸಿದೆ.
‘ಉದ್ಯೋಗ ಸಂಬಂಧಿತ ಒತ್ತಡಗಳು ವೃತ್ತಿ ಮತ್ತು ವೈಯಕ್ತಿಕ ಬದುಕಿನ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತವೆ. ಭಾರತೀಯ ಕಂಪೆನಿಗಳು ಒತ್ತಡ ಮುಕ್ತ ವಾತಾವರಣ ಕಲ್ಪಿಸಲು ಗಮನ ಹರಿಸಬೇಕು’ ಎಂದು ರೇಗಸ್ ಇಂಡಿಯಾದ ಕಾರ್ಯನಿರ್ವಾಹಕ ಅಧಿಕಾರಿ ಶಶಿಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಮಟ್ಟದಲ್ಲಿ ಶೇ 48ರಷ್ಟು ಉದ್ಯೋಗಿಗಳು ಮಾತ್ರ ‘ನೌಕರಿ ಅಭದ್ರತೆ’ ಎದುರಿಸುತ್ತಿರುವುದಾಗಿ ಹೇಳಿದ್ದಾರೆ.