ನವದೆಹಲಿ (ಪಿಟಿಐ): ದೇಶದಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ‘ಭಾರತ್ ತೀರ್ಥ’ ರೈಲಿಗೆ ಕೋಲ್ಕತ್ತದ ಹೌರಾದಲ್ಲಿ ಫೆ19ರಂದು ಚಾಲನೆ ನೀಡಲಿದೆ.
2010-11ರ ರೈಲ್ವೆ ಬಜೆಟ್ನಲ್ಲಿ ಸಚಿವೆ ಮಮತಾ ಬ್ಯಾನರ್ಜಿ ಅವರು ಈ ರೈಲಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. 12 ಬೋಗಿಗಳನ್ನು ಹೊಂದಿರುವ ವಿಶೇಷ ಪ್ರವಾಸಿ ರೈಲು 15 ದಿನಗಳ ಕಾಲ ಭುವನೇಶ್ವರ, ತಿರುಪತಿ, ಬೆಂಗಳೂರು, ಮೈಸೂರು, ಕನ್ಯಾಕುಮಾರಿ, ರಾಮೇಶ್ವರ, ಮದುರೆ, ಚೆನ್ನೈ, ವಿಶಾಖಪಟ್ಟಣ ಸೇರಿದಂತೆ ಪ್ರಮುಖ ನಗರಗಳ ಮೂಲಕ ಸಂಚರಿಸಲಿದೆ.
ಈ ರೈಲಿನಲ್ಲಿ ಮೂರು ರೀತಿಯ ಪ್ಯಾಕೇಜ್ಗಳಿದ್ದು, ಬಜೆಟ್, ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಸೌಲಭ್ಯಗಳಿಗೆ ಪ್ರಯಾಣಿಕರಿಗೆ ಒದಗಿಸಲಾಗುವುದು ಎಂದು ಐಆರ್ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಬಜೆಟ್ ವಿಭಾಗದಲ್ಲಿ ಪ್ರತಿ ಪ್ರಯಾಣಿಕರಿಗೆ 15 ದಿನಗಳ ಪ್ರಯಾಣಕ್ಕೆ ್ಙ 7,700 ಸ್ಟ್ಯಾಂಡರ್ಡ್ ವಿಭಾಗದಲ್ಲಿ ್ಙ 12,310 ಮತ್ತು ಡಿಲಕ್ಸ್ ವಿಭಾಗದಲ್ಲಿ ್ಙ 21,550 ನಿಗದಿ ಮಾಡಲಾಗಿದೆ.
ಈ ಪ್ರಯಾಣ ದರದಲ್ಲಿ ರೈಲು ಪ್ರಯಾಣ, ರಸ್ತೆ ಪ್ರಯಾಣ, ಮಾರ್ಗದರ್ಶಕರು, ಹೋಟೆಲ್ನಲ್ಲಿ ತಂಗುವುದು ಹಾಗೂ ಆಹಾರವನ್ನು ಒಳಗೊಂಡಿದೆ. ದಕ್ಷಿಣ ಭಾರತವನ್ನು ಗುರಿಯಾಗಿರಿಸಿಕೊಂಡಿರುವ ಈ ರೈಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ‘ಭಾರತ್ ತೀರ್ಥ’ ರೈಲು ಪಶ್ಚಿಮ ಭಾರತವನ್ನು ಗುರಿಯಾಗಿರಿಸಿಕೊಂಡಿದ್ದು, ಮಾರ್ಚ್ ವೇಳೆಗೆ ಸಂಚಾರ ಆರಂಭಿಸಲಿದೆ ಎಂದೂ ಅವರು ತಿಳಿಸಿದ್ದಾರೆ.