ನವದೆಹಲಿ (ಪಿಟಿಐ): ಭಯೋತ್ಪಾದನೆ, ಸೈಬರ್ ಅಪರಾಧ ಸೇರಿದಂತೆ ದೇಶದ ಭದ್ರತೆ ಕುರಿತ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮಾರ್ಗೋಪಾಯಗಳ ಬಗ್ಗೆ ಭಾರತ ಮತ್ತು ಅಮೆರಿಕದ ಉನ್ನತ ಭದ್ರತಾ ಅಧಿಕಾರಿಗಳು ಬುಧವಾರ ಇಲ್ಲಿ ಚರ್ಚಿಸಿದರು. ಎರಡು ದಿನಗಳ ಉಭಯ ರಾಷ್ಟ್ರಗಳ ಪೊಲೀಸ್ ಮುಖ್ಯಸ್ಥರ ಶೃಂಗಸಭೆಯನ್ನು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಉದ್ಘಾಟಿಸಿದರು.
ಭಯೋತ್ಪಾದನೆ, ಮಾದಕ ವಸ್ತುಗಳ ಕಳ್ಳ ಸಾಗಣೆ, ರಾಷ್ಟ್ರಗಳ ಗಡಿ ಮೀರಿದ ಅಪರಾಧ ಚಟುವಟಿಕೆಗಳು ಸೇರಿದಂತೆ ಭದ್ರತೆಗೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿ ಸಲು ಜಾಗತಿಕ ಮಟ್ಟದಲ್ಲಿ ಪರಸ್ಪರ ಸಂಪರ್ಕ ಸಾಧಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಶೃಂಗಸಭೆಯನ್ನು ಉದ್ದೇಶಿಸಿ ಮಾತ ನಾಡಿದ ಶಿಂಧೆ, ‘ಅಮೆರಿಕದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವವಾದುದು. ಆಂತರಿಕ ಭದ್ರತೆಗೆ ಇನ್ನಷ್ಟು ಒತ್ತು ನೀಡುವ ವಿಷಯದಲ್ಲಿ ಪಾಲುದಾರ ರಾಷ್ಟ್ರಗಳಾಗಿ ನಾವು ಹೆಚ್ಚು ಕೆಲಸಗಳನ್ನು ಮಾಡಿದರೆ, ನಮ್ಮ ಬಾಂಧವ್ಯ ಹೆಚ್ಚು ಅರ್ಥಪೂರ್ಣವಾಗುತ್ತದೆ’ ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ನ್ಯೂಯಾರ್ಕ್ ಮೇಲೆ ನಡೆದ 9/11 ಮತ್ತು ಮುಂಬೈ ಮೇಲಿನ 26/11 ದಾಳಿಗಳನ್ನು ಉಲ್ಲೇಖಿಸಿದ ಶಿಂಧೆ, ‘ಹೆಚ್ಚಿನ ಹಾನಿ ಮಾಡುವ ಉದ್ದೇಶದಿಂದ ದೊಡ್ಡ ಮತ್ತು ಹೆಚ್ಚು ಜನ ಸಾಂಧ್ರತೆ ಇರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡೇ ಭಯೋತ್ಪಾದನಾ ದಾಳಿಗಳನ್ನು ನಡೆಸಲಾಗುತ್ತದೆ’ ಎಂದು ಹೇಳಿದರು.
ಭಯೋತ್ಪಾದನಾ ಚಟುವಟಿಕೆಗಳ ಪತ್ತೆ, ಅವುಗಳ ತಡೆ, ದಾಳಿಯ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗೃಹ ಇಲಾಖೆ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಹೇಳಿದರು. ಪರಸ್ಪರ ಸಹಕಾರದ ಬಗ್ಗೆ ಇದೇ ಮೊದಲ ಬಾರಿಗೆ ಎರಡೂ ರಾಷ್ಟ್ರಗಳ ಭದ್ರತಾ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ಸಹಾಯಕ ಕಾರ್ಯದರ್ಶಿ ಡೇವಿಡ್ ಹೇಮನ್ ತಿಳಿಸಿದರು.