ರಾಯಚೂರು: ಇಲ್ಲಿನ ನವೋದಯ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಯುವಜನ ಸೇವಾ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಎನ್ಎಸ್ಎಸ್ ಕೋಶ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಭಾವೈಕ್ಯ ಶಿಬಿರದಲ್ಲಿ ದೇಶದ ವಿವಿಧ ಭಾಗಗಳಿಂದ 180ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.
ಈ ಶಿಬಿರಾರ್ಥಿಗಳಿಗೆ ಯೋಗ ತರಬೇತಿಯನ್ನೂ ಆಯೋಜಿಸಲಾಗಿದೆ., ಭಾನುವಾರ ನಡೆದ ಶಿಬಿರದಲ್ಲಿ ಕೇರಳ, ತಮಿಳುನಾಡು, ಗುಜರಾತ್, ಆಸ್ಸಾಂ ರಾಜ್ಯ ಸೇರಿದಂತೆ ಹಲವು ರಾಜ್ಯಗಳ 180 ಶಿಬಿರಾರ್ಥಿಗಳು ಹಾಗೂ ಎನ್ಎಸ್ಎಸ್ ಸಂಯೋಜನಾಧಿಕಾರಿಗಳು ಭಾಗವಹಿಸಿದ್ದರು.
ಶಿಬಿರದ ಆರಂಭದಲ್ಲಿ ಶ್ರೀ ರವಿಶಂಕರ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜೀವನ ಕಲೆ ಸ್ಥಳೀಯ ಶಿಕ್ಷಕ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಆರೋಗ್ಯಯುತ, ಸಂತೋಷಯುತ ಜೀವನಕ್ಕೆ ಯೋಗ ಸಹಕಾರಿಯಾಗಿದೆ. ವಿದ್ಯಾರ್ಥಿ ಜೀವನ ಚಂಚಲ ಮನಸ್ಸು ಉಳ್ಳದ್ದು. ಚಂಚಲ ಮನಸ್ಸು ನಿಯಂತ್ರಿಸಿ ಸಾಧನೆಯ ಉತ್ತುಂಗಕ್ಕೆ ಯೋಗ ಕೊಂಡೊಯ್ಯಬಲ್ಲದು ಎಂದು ತಿಳಿಸಿದರು.
ಮುಂಗೋಪ, ನಿರುತ್ಸಾಹ, ಅಸಂತೋಷದಿಂದ ಹೊರ ಬರಲು ಯೋಗ ಸಹಕಾರಿಯಾಗುತ್ತದೆ. ಹಲವಾರು ಜನರು ಯೋಗ ಪರಿಪಾಲನೆ ಮೂಲಕ ಮನಗಂಡಿದ್ದಾರೆ ಎಂದು ವಿವರಿಸಿದರು.
ಶಿಬಿರಾಧಿಕಾರಿ ಎಂ.ಟಿ ಪಾಟೀಲ್, ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಜಾಲ್ದಾರ, ಸದಸ್ಯ ಶ್ರೀನಿವಾಸ ಶಿಂಧೆ ಇದ್ದರು.