ಸುರಪುರ: ತಿಮ್ಮಾಪುರ ಸಮೀಪದ ಉಸ್ತಾದ ಕೆರೆಯ ಪಕ್ಕದ ಹೊಲ ದಲ್ಲಿರುವ ಹಜರತ್ ಸೈಯದ್ ಚಾಹುಸೇನಿ ವಲಿಅಲ್ಲಾ ಚಿಸ್ತಿ ಶಾ ಖಾದ್ರಿ ಅಲ್-ಜಲಿ ಭಗದಾದಿ ಅವರ ಉರುಸ್ ಬುಧುವಾರ ಸಡಗರ ಸಂಭ್ರಮದಿಂದ ಜರುಗಿತು.
ಮಂಗಳವಾರ ಸಂಜೆ ತಿಮ್ಮಾಪುರದ ದೊಡ್ಡ ಮಸೀದಿನಿಂದ ಸಾವಿರಾರು ಭಕ್ತರೊಂದಿಗೆ ಬಾಜಾ ಭಜಂತ್ರಿ ಮೂಲಕ ಭವ್ಯ ಸಂದಲ್ ಮೆರವಣಿಗೆ ನಡೆಯಿತು.
ಬುಧುವಾರ ಬೆಳಗ್ಗೆ ಚಾಹುಸೇನಿ ವಲಿ ದರ್ಗಾಕ್ಕೆ ಸಜ್ಜಾದ ನಸೀನ್ ಸೈಯದ್ ಶಾ ಮಹ್ಮದ ಖಾಜಾ ಹುಸೇನ್ ಚಿಸ್ತಿ ಶಾ ಖಾದ್ರಿ ಗಂಧ ಲೇಪನ ಮಾಡಿದರು. ಉರುಸ್ ಅಂಗವಾಗಿ ದರ್ಗಾಕ್ಕೆ ಗಲೀಫ್ ಹಾಕಿ ಹೂಹಾರದಿಂದ ಸಿಂಗರಿಸಲಾಗಿತ್ತು. ಉರುಸ್ಗೆ ಆಗಮಿಸಿದ ನೂರಾರು ಭಕ್ತರು ದರ್ಗಾಕ್ಕೆ ಗೋಧಿ ಮಾದ ಲಿಯ ನೈವೇದ್ಯ ನೀಡಿ ಸಕ್ಕರೆ ಫಾತೆ ನೀಡಿದರು. ತಮ್ಮ ಇಷ್ಟಾರ್ಥಗಳು ನೆರವೇರಿದ ಭಕ್ತರು ಹರಕೆ ತೀರಿಸಿದರು.
ನಂತರ ನಡೆದ ಧರ್ಮೋಪದೇಶದ ಸಾನ್ನಿಧ್ಯ ವಹಿಸಿದ್ದ ದರ್ಗಾದ ಸಜ್ಜಾದ ನಸೀನ್ ಸೈಯದ್ ಶಾ ಮಹ್ಮದ ಖಾಜಾಹುಸೇನ್ ಚಿಸ್ತಿ ಮಾತನಾಡಿ, ಸಗರನಾಡಿನಲ್ಲಿ ಚಾಹುಸೇನ ಅತ್ಯಂತ ಶ್ರೇಷ್ಠ ವಲಿಯಾಗಿದ್ದಾರೆ. ಇವರು ಭಕ್ತರ ಬಾಳಿನ ಕಲ್ಪತರು ಇದ್ದಂತೆ ಧರ್ಮಪ್ರಚಾರಕ್ಕಾಗಿಯೇ ಅವರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ವಲಿ ಇಸ್ಲಾಂ ಧರ್ಮಧ ಪ್ರಚಾರಕ್ಕೆ ಮಾತ್ರ ಸೀಮಿತರಾಗಿರಲಿಲ್ಲ. ಇತರೆ ಧರ್ಮಗಳನ್ನು ಗೌರವಿಸುತ್ತಿದ್ದರು ಎಂದರು.
ಧರ್ಮಗಳು ಆಚರಣೆಗಾಗಿ ಮಾತ್ರ. ಆದರೆ ಬದುಕಿಗಾಗಿ ಅಲ್ಲ. ಸಮಾಜದಲ್ಲಿ ಎಲ್ಲಾ ಧರ್ಮದವದರೊಂದಿಗೆ ಸ್ನೇಹ ಸೌಹಾರ್ದತೆಯಿಂದ ಬಾಳುವುದನ್ನು ವಲಿ ಕಲಿಸಿಕೊಟ್ಟಿದ್ದಾರೆ. ಅವರು ಸಿದ್ದಿ ಪುರುಷರಾಗಿದ್ದರು. ಅವರು ತೋರಿದ ಅನೇಕ ಪವಾಡಗಳು ಇಂದಿಗೂ ಜನಮನದಲ್ಲಿವೆ. ಅವರ ಮೇಲೆ ಭಕ್ತಿ ಇಟ್ಟು ಶ್ರದ್ಧೆಯಿಂದ ನಡೆದುಕೊಂಡರೆ ಖಂಡಿತ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂದರು.
ಗುಲ್ಬರ್ಗದ ಖಾಜಾ ಬಂದೇನವಾಜ ದರ್ಗಾದ ಖಾಜಾ ಹುಸೇನ ತಂಡದವರಿಂದ ನಡೆದ ಕವ್ಹಾಲಿ ಜನ ಮನ ಸೂರೆಗೊಂಡಿತು. ವಿವಿಧೆಡೆಯಿಂದ ಸೇರಿದಂತೆ ಸಾಕಷ್ಟು ಭಕ್ತರು ಆಗಮಿಸಿದ್ದರು. ಉರುಸ್ ಭಾವೈಕ್ಯತೆಯ ಪ್ರತೀಕವಾಗಿತ್ತು. ಗುರುವಾರ ಸಂಜೆ ಜಿಯಾರತನೊಂದಿಗೆ ಉರುಸ್ ಮುಕ್ತಾಯವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.