ಬಾಗಲಕೋಟೆ: ಕೊಂಕಣಿಯ ಲಿಪಿ ಕನ್ನಡವೇ ಆಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಅವರು ತಿಳಿಸಿದರು.ಬಾಗಲಕೋಟೆಯಲ್ಲಿ ಏರ್ಪಡಿಸಿದ್ದ ಕೊಂಕಣಿ- ಕನ್ನಡ ಸಾಹಿತ್ಯ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾರವಾರ ಮತ್ತು ಗೋವಾ ಪ್ರಾಂತದಲ್ಲಿ ಹೆಚ್ಚು ಕೊಂಕಣಿ ಭಾಷಿಕರಿದ್ದಾರೆ. 1994 ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಾರಂಭವಾಗಿದೆ. 1977ರಲ್ಲಿ ಸಂವಿಧಾನಿಕವಾಗಿ ರಾಷ್ಟ್ರೀಯ ಭಾಷೆಯಾಗಿದೆ ಎಂದ ಅವರು, ಈ ರೀತಿಯ ಕಾರ್ಯಕ್ರಮಗಳು ಭಾಷಾ ಬಾಂಧವ್ಯಕ್ಕೆ ಪೂರಕವಾಗುತ್ತವೆ ಮತ್ತು ಭಾಷಾ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸರ್ಕಾರ 50 ಲಕ್ಷ ರೂ. ಹಾಗೂ ದೈವಜ್ಞ ಸಮಾಜಕ್ಕೆ 1 ಕೋಟಿ ರೂ. ಗಳ ಅನುದಾನವನ್ನು ನೀಡಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶ್ರೀ ನಾರಾಯಣಸಾ ಭಾಂಡಗೆ ಅವರು ಕೊಂಕಣಿ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿದ ಭಾಷೆಯಾಗಿದೆ ಎಂದರು.
ಸಾಹಿತ್ಯ ಅಕಾಡೆಮಿ ಸದಸ್ಯರಾದ ಬಾಳಾಸಾಹೇಬ ಲೋಕಾಪೂರ ಅವರು ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ರವೀಂದ್ರ ಕೊಳೇಕರ ಕೊಂಕಣಿ ಭಾಷಿಕರಾಗಿದ್ದಾರೆ ಎಂದ ಅವರು ಕನ್ನಡ ಮತ್ತು ಕೊಂಕಣಿ ಮಧ್ಯೆ ಭಾಷಾಂತರ ಕಾರ್ಯ ಹೆಚ್ಚಾಗಲಿ ಎಂದು ತಿಳಿಸಿದರು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಜಿ. ಕೋಟಿ ಅವರು ಕೊಂಕಣಿ ಕನ್ನಡ ಭಾಷೆಗಳ ಬಾಂಧವ್ಯ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕುಂದಾಪುರ ನಾರಾಯಣ ಕಾರ್ವೇ ಕೊಂಕಣಿ ಭಾಷೆಯ ಬಗ್ಗೆ ಭಾಷಿಕರು ಅಭಿಮಾನ ಪಡಬೇಕೆಂದರು. ದೈವಜ್ಞ ಸಮಾಜದ ಅಧ್ಯಕ್ಷ ಶಂಕರ ಗಜಾನನ ರಾಯಕರ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ ಸ್ವಾಗತಿಸಿದರು. ಕೊಂಕಣಿ ಅಕಾಡೆಮಿ ರಿಜಿಸ್ಟಾರ್ ಎಸ್.ಎಚ್. ಶಿವರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೂ, ಕ್ರೈಸ್ತ, ಮುಸ್ಲಿಂ ಧರ್ಮ ಸೇರಿ 40 ಸಮುದಾಯಗಳ ಜನ ಈ ಭಾಷೆಯನ್ನಾಡುತ್ತಾರೆ ಎಂದರು.
ಅಕಾಡೆಮಿ ಸದಸ್ಯ ವಸಂತ ಬಾಂಡೇಕರ ವಂದಿಸಿದರು. ವಾಸುದೇವ ಶಾನಭಾಗ ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ನಾಗೇಶ ಅಣ್ವೇಕರ, ತಾರಾನಾಥ ನಾಯ್ಕರ, ಲಲಿತಾ ಹೊಸಪೇಟಿ, ಡಾ.ಪ್ರಕಾಶ ಖಾಡೆ, ಎಸ್.ಬಿ. ಜೇರಿ, ಅವಿನಾಶ ವೋಗ್ಳೆ, ಡಾ.ವಿಠ್ಠಲಕೋಡ ಭಾಗವಹಿಸಿದ್ದರು. ನಂತರ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.