ಚಾಮರಾಜನಗರ: ಕನ್ನಡ ಮತ್ತು ಉರ್ದು ಭಾಷೆಗಳಿಗೆ ಕಂಟಕ ತರುವಂತಹ ನೀತಿ ರೂಪಿಸಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಜಿಲ್ಲೆಯ ಗಡಿಗೆ ಅಂಟಿಕೊಂಡಿರುವ ತಾಳವಾಡಿಯಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ತಾಳವಾಡಿ ಫಿರ್ಕಾದಲ್ಲಿ 28 ಕನ್ನಡ ಮಾಧ್ಯಮ ಶಾಲೆ, 9 ಮಾಧ್ಯಮಿಕ ಶಾಲೆ, 3 ಪ್ರೌಢಶಾಲೆ ಹಾಗೂ 2 ಪದವಿಪೂರ್ವ ಕಾಲೇಜುಗಳಿದ್ದು, ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಕನ್ನಡ ಸಂಘದ ನೇತೃತ್ವದಡಿ ನಡೆದ ಪ್ರತಿಭಟನಾ ಮೆರವಣಿಗೆ ನೇತಾಜಿ ವೃತ್ತದಿಂದ ಆರಂಭಗೊಂಡಿತು. ಶಿಕ್ಷಣಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿದರು.
ಈ ಮೊದಲು ಪ್ರಥಮ ಭಾಷೆ ಕನ್ನಡಕ್ಕೆ ಶೇ. 100 ಅಂಕ ನಿಗದಿಪಡಿಸಲಾಗಿತ್ತು. ಪ್ರಸ್ತುತ 50 ಅಂಕಕ್ಕೆ ಕಡಿತಗೊಳಿಸಲಾಗಿದೆ. ಉಳಿದ ಅಂಕಕ್ಕೆ ಪ್ರಥಮ ಭಾಷೆಯಾಗಿ ತಮಿಳು ಕಲಿಯಲು ಆದೇಶಿಸಲಾಗಿದೆ. ಕನ್ನಡ ಶಾಲೆಗಳಿಗೆ ತಮಿಳು ಭಾಷಾ ಶಿಕ್ಷಕರನ್ನು ನೇಮಿಸಲಾಗಿದೆ. ಕೂಡಲೇ, ಈ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಥಮ ಭಾಷೆಯಾಗಿ ಉರ್ದು ಓದುವ ಮಕ್ಕಳು ಕೂಡ ಸರ್ಕಾರದ ನೀತಿಯಿಂದ ತೊಂದರೆ ಅನುಭವಿಸುವಂತಾಗಿದೆ.