ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ವಿರೋಧಿ ನೀತಿಗೆ ಖಂಡನೆ

ತಾಳವಾಡಿಯಲ್ಲಿ ಕನ್ನಡಿಗರ ಬೃಹತ್ ಪ್ರತಿಭಟನೆ
Last Updated 3 ಜನವರಿ 2013, 19:59 IST
ಅಕ್ಷರ ಗಾತ್ರ

ಚಾಮರಾಜನಗರ: ಕನ್ನಡ ಮತ್ತು ಉರ್ದು ಭಾಷೆಗಳಿಗೆ ಕಂಟಕ ತರುವಂತಹ ನೀತಿ ರೂಪಿಸಿರುವ ತಮಿಳುನಾಡು ಸರ್ಕಾರದ ಕ್ರಮ ಖಂಡಿಸಿ ಜಿಲ್ಲೆಯ ಗಡಿಗೆ ಅಂಟಿಕೊಂಡಿರುವ ತಾಳವಾಡಿಯಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.

ತಾಳವಾಡಿ ಫಿರ್ಕಾದಲ್ಲಿ 28 ಕನ್ನಡ ಮಾಧ್ಯಮ ಶಾಲೆ, 9 ಮಾಧ್ಯಮಿಕ ಶಾಲೆ, 3 ಪ್ರೌಢಶಾಲೆ ಹಾಗೂ 2 ಪದವಿಪೂರ್ವ ಕಾಲೇಜುಗಳಿದ್ದು, ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಕನ್ನಡ ಸಂಘದ ನೇತೃತ್ವದಡಿ ನಡೆದ ಪ್ರತಿಭಟನಾ ಮೆರವಣಿಗೆ ನೇತಾಜಿ ವೃತ್ತದಿಂದ ಆರಂಭಗೊಂಡಿತು. ಶಿಕ್ಷಣಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಿದರು.

ಈ ಮೊದಲು ಪ್ರಥಮ ಭಾಷೆ ಕನ್ನಡಕ್ಕೆ ಶೇ. 100 ಅಂಕ ನಿಗದಿಪಡಿಸಲಾಗಿತ್ತು. ಪ್ರಸ್ತುತ 50 ಅಂಕಕ್ಕೆ ಕಡಿತಗೊಳಿಸಲಾಗಿದೆ. ಉಳಿದ ಅಂಕಕ್ಕೆ ಪ್ರಥಮ ಭಾಷೆಯಾಗಿ ತಮಿಳು ಕಲಿಯಲು ಆದೇಶಿಸಲಾಗಿದೆ. ಕನ್ನಡ ಶಾಲೆಗಳಿಗೆ ತಮಿಳು ಭಾಷಾ ಶಿಕ್ಷಕರನ್ನು ನೇಮಿಸಲಾಗಿದೆ. ಕೂಡಲೇ, ಈ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಥಮ ಭಾಷೆಯಾಗಿ ಉರ್ದು ಓದುವ ಮಕ್ಕಳು ಕೂಡ ಸರ್ಕಾರದ ನೀತಿಯಿಂದ ತೊಂದರೆ ಅನುಭವಿಸುವಂತಾಗಿದೆ.

ಬಲವಂತವಾಗಿ ತಮಿಳು ಕಲಿಯಲು ಒತ್ತಡ ಹೇರಲಾಗುತ್ತಿದೆ. ಅಂಕ ಕಡಿತಗೊಳಿಸಿರುವ ಪರಿಣಾಮ ಭವಿಷ್ಯದಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ತೊಂದರೆಗೆ ಸಿಲುಕಲಿದ್ದಾರೆ. ಈ ಹಿನ್ನೆಲೆಯಲ್ಲಿ ಆದೇಶವನ್ನು ಹಿಂದಕ್ಕೆ ಪಡೆದು ಕನ್ನಡ, ಉರ್ದು ಭಾಷೆ ಉಳಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT