ಚಿತ್ರದುರ್ಗ: ಪಾಳೇಗಾರರ ಕಾಲದಲ್ಲಿ ನಿರ್ಮಿಸಲಾದ ಪುರಾತನ ಕೆರೆಗಳಲ್ಲಿ ಒಂದಾದ ತಾಲ್ಲೂಕಿನ ಭೀಮಸಮುದ್ರ ಕೆರೆ ಅಭಿವೃದ್ಧಿ ಹಾಗೂ ಕುಮಟಾ-ಕಡಮಡಗಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ಚಾಲನೆ ನೀಡಿದರು.
ಪ್ರಧಾನಮಂತ್ರಿಗಳ ವಿಶೇಷ ಪ್ಯಾಕೇಜ್ನಲ್ಲಿ ಕೆರೆ ಪುನಶ್ಚೇತನ ಹಾಗೂ ನಾಲೆಗಳ ಆಧುನೀಕರಣ ಸೇರಿದಂತೆ ರೂ 9.37 ಕೋಟಿ ಸಮಗ್ರ ಯೋಜನೆಗೆ ಕೇಂದ್ರ ಸರ್ಕಾರ ಜುಲೈ 2009ರಲ್ಲಿಯೇ ಅನುಮೋದನೆ ನೀಡಿದ್ದು, ನಾನಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 0.9 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಕೆರೆ 2 ಸಾವಿರ ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶ ಹೊಂದಿದೆ.
ಗಣಿಗಾರಿಕೆಯಿಂದಾಗಿ ಕೆರೆ ಹೂಳು ತುಂಬಿದ್ದು, ಕೇವಲ 0.5 ಟಿಎಂಸಿ ನೀರು ಮಾತ್ರ ಸಂಗ್ರಹ ಸಾಧ್ಯವಿದೆ. ಈಗಾಗಲೇ ಬೆಟ್ಟದ ನಾಗೇನಹಳ್ಳಿ ಗುಡ್ಡದಿಂದ ಕೆರೆಗೆ ನೀರು ಒದಗಿಸುವ ಪೂರಕ ನಾಲೆಯನ್ನು ರೂ 72 ಲಕ್ಷಗಳಲ್ಲಿ ದುರಸ್ತಿ ಮಾಡಲಾಗಿದೆ. ಜೋಗಿಹಳ್ಳದ ಪೂರಕ ನಾಲೆಯನ್ನು ಈ ಯೋಜನೆಯಡಿ ರೂ 65.50 ಲಕ್ಷ ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತಿದೆ. ಜತೆಗೆ, ಅನ್ನೇಹಾಳ್ ಕೆರೆಯಿಂದ ಹೊರ ಬರುವ ಹೆಚ್ಚುವರಿ ನೀರಿಗೂ ಪೂರಕ ನಾಲೆ ನಿರ್ಮಿಸುವ ಕಾಮಗಾರಿಯೂ ಯೋಜನೆಯಲ್ಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಸೀಮೆಂಟ್ಕಾಂಕ್ರಿಟ್ ಲೈನಿಂಗ್ ಮೂಲಕ ನಾಲೆಗಳ ಅಧುನೀಕರಣ ಸೇರಿದಂತೆ ನಾಲೆ ಉದ್ದಕ್ಕೂ ಎತ್ತಿನಗಾಡಿ ಸೇತುವೆ, ರಸ್ತೆ ಸೇತುವೆ, ಬಾಕ್ಸ್ಕಲ್ವರ್ಟ್, ತೂಬು, ಕೆರೆ ಏರಿ ಒಳಭಾಗ ಪುನರ್ ನಿರ್ಮಿಸಲಾಗುತ್ತಿದೆ. ಇದರೊಟ್ಟಿಗೆ ಕೆರೆ ವ್ಯಾಪ್ತಿಯ ಅಚ್ಚುಕಟ್ಟು ರಸ್ತೆಯ 13 ಕಾಮಗಾರಿಗಳನ್ನು ರೂ 95 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಈ ಕೆರೆ ಅಭಿವೃದ್ಧಿಯಾಗಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚುವುದರಿಂದ ತೊರೆಬೈಲ್, ಹಳಿಯೂರು, ಚಿಕ್ಕಗುಂಟನೂರು, ಬೆಟ್ಟದ ನಾಗೇನಹಳ್ಳಿ, ಹಿರೇಗುಂಟನೂರು ಸೇರಿದಂತೆ 11 ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.