ಕ್ವಾಲಾಲಂಪುರ (ಪಿಟಿಐ): ಭಾರತದ ಗಾಲ್ಫ್ ಆಟಗಾರ ಗಗನ್ಜೀತ್ ಭುಲ್ಲರ್ ಅವರು ಏಷ್ಯನ್ ಟೂರ್ ‘ಆರ್ಡರ್ ಆಫ್ ಮೆರಿಟ್’ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಭುಲ್ಲರ್ ಪ್ರಸಕ್ತ ಋತುವಿನಲ್ಲಿ ಒಟ್ಟು ₨ 2.86 ಕೋಟಿ ಬಹುಮಾನ ಮೊತ್ತ ಪಡೆದುಕೊಂಡಿದ್ದಾರೆ. ಭಾರತದ ಆಟಗಾರ ಭಾನುವಾರ ಕೊನೆಗೊಂಡ ಇಂಡೊನೇಷ್ಯಾ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.
ಪ್ರಸಕ್ತ ವರ್ಷ ಒಟ್ಟು ಆರು ಕೋಟಿಗೂ ಅಧಿಕ ಮೊತ್ತವನ್ನು ಬಹುಮಾನ ರೂಪದಲ್ಲಿ ಪಡೆದಿರುವ ಥಾಯ್ಲೆಂಡ್ನ ಕಿರಾದೆಶ್ ಅಪಿಬರ್ನತ್ ಆರ್ಡರ್ ಆಫ್ ಮೆರಿಟ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
₨ 3.5 ಕೋಟಿ ಬಹುಮಾನ ಮೊತ್ತ ಕಲೆಹಾಕಿರುವ ಆಸ್ಟ್ರೇಲಿಯಾದ ಸ್ಕಾಟ್ ಹೆಂಡ್ ಎರಡನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ಸಿದ್ದೀಕುರ್ ರೆಹ್ಮಾನ್ (₨ 3 ಕೋಟಿ) ಮೂರನೇ ಸ್ಥಾನ ಪಡೆದಿದ್ದಾರೆ.
2013ರ ಋತುವಿನ ಕೊನೆಯಲ್ಲಿ ಆರ್ಡ್ ಆಫ್ ಮೆರಿಟ್ನಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆಯುವವರು ‘ಯೂರೊ -ಏಷ್ಯಾ’ ಕಪ್ ಟೂರ್ನಿ ಯಲ್ಲಿ ಏಷ್ಯಾ ತಂಡವನ್ನು ಪ್ರತಿನಿಧಿಸಲು ಅರ್ಹತೆ ಪಡೆದುಕೊಳ್ಳುವರು. ಆದ್ದರಿಂದ ಭುಲ್ಲರ್ಗೆ ತಂಡದಲ್ಲಿ ಸ್ಥಾನ ಪಡೆಯುವ ಉತ್ತಮ ಅವಕಾಶವಿದೆ.
‘ಯೂರೊ- ಏಷ್ಯಾ ಟೂರ್ನಿಯಲ್ಲಿ ಪಾಲ್ಗೊಳ್ಳುವ ಏಷ್ಯಾದ ತಂಡದಲ್ಲಿ ಸ್ಥಾನ ಪಡೆಯುವುದು ನನ್ನ ಬಯಕೆ. ನನ್ನ ಮುಂದಿರುವ ಗುರಿ ಅದೊಂದೇ’ ಎಂದು ಭುಲ್ಲರ್ ನುಡಿದಿದ್ದರು.
‘ಯೂರೊ- ಏಷ್ಯಾ ಟೂರ್ನಿಯಲ್ಲಿ ಆಡಬೇಕು ಎಂಬುದರ ಬಗ್ಗೆ ಯೋಚಿಸಿಯೇ ಇರಲಿಲ್ಲ. ಆದರೆ ಇದೀಗ ಆರ್ಡರ್ ಆಫ್ ಮೆರಿಟ್ನಲ್ಲಿ ನಾಲ್ಕನೇ ಸ್ಥಾನ ಲಭಿಸಿರುವುದು ನನ್ನಲ್ಲಿ ಹೊಸ ಭರವಸೆ ಮೂಡಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುವುದು ನನ್ನ ಬಯಕೆ’ ಎಂದಿದ್ದರು.