ಹೊಸನಗರ: ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೋಟದಮನೆ ಗ್ರಾಮದ ಎಸ್ಸಿ ಕಾಲೊನಿ ಸಂಪರ್ಕ ರಸ್ತೆ ಕುಸಿದಿದೆ.ರಸ್ತೆ ಬದಿಯ ಭೂಕುಸಿತದ ಪರಿಣಾಮ ಶರಾವತಿ ಹಿನ್ನೀರಿನ ತೋಟದ ಮನೆಯ ಕುಗ್ರಾಮದ ಸುಮಾರು 40ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಬಡವರು ರಸ್ತೆ ಸಂಪರ್ಕದಿಂದ ವಂಚಿತರಾಗಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷ ಎಚ್.ಜಿ. ರಮಾಕಾಂತ್ ಹಾಗೂ ಸದಸ್ಯ ಡಿ.ಟಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.
50 ಅಡಿಗಳಿಗೂ ಹೆಚ್ಚು ಆಳದ ಭೂಕುಸಿತ ಉಂಟಾಗಿದ್ದು, ಅದು ಮುಂದುವರಿಯದಂತೆ ತಡೆಗೋಡೆ ನಿರ್ಮಿಸಬೇಕು ಹಾಗೂ ಕುಸಿದ ರಸ್ತೆಯನ್ನು ದುರಸ್ತಿ ಮಾಡಿ ಗ್ರಾಮಸ್ಥರಿಗೆ ಮರು ಸಂಪರ್ಕ ಕಲ್ಪಿಸಬೇಕು. ರಸ್ತೆ ದುರಸ್ತಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಹಣ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.