ನವದೆಹಲಿ (ಐಎಎನ್ಎಸ್): ಭೂ ಸುಧಾರಣೆ ವಿಚಾರಗಳು, ಭೂ ದಾಖಲೆಗಳ ಆಧುನೀಕರಣ, ಕಂದಾಯ ಆಡಳಿತದ ನವೀಕರಣ ಕುರಿತು ಚರ್ಚಿಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವ ಸಾಧ್ಯತೆ ಇದೆ.
`ಭೂ ಸುಧಾರಣಾ ವಿಷಯಗಳು ಆಯಾಯ ರಾಜ್ಯಕ್ಕೆ ಸೇರಿದ್ದಾಗಿರುವುದರಿಂದ ಇದಕ್ಕೆ ಸಂಬಂಧಪಟ್ಟ ಎಲ್ಲ ವಿಚಾರಗಳೂ ಸಭೆಯಲ್ಲಿ ಚರ್ಚೆಗೆ ಬರಲಿವೆ~ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಶನಿವಾರ ಹೇಳಿದ್ದಾರೆ.
ಯಾವುದೇ ಭೂ ಸುಧಾರಣಾ ಕಾರ್ಯಕ್ರಮಗಳಿಗೆ ಭೂ ದಾಖಲೆಗಳ ಪರಿಷ್ಕರಣೆ ಅಗತ್ಯವಾಗಿರುವುದರಿಂದ ಮತ್ತು ಅದರಲ್ಲೂ ಮುಖ್ಯವಾಗಿ ಬುಡಕಟ್ಟು ಪ್ರಾಂತ್ಯಗಳಲ್ಲಿ ಸ್ಥಳೀಯ ಆಡಳಿತವೇ ಈ ಕೆಲಸವನ್ನು ಮಾಡಬೇಕಾಗಿರುವುದರಿಂದ ಎಲ್ಲ ರಾಜ್ಯಗಳನ್ನೂ ಒಂದೆಡೆ ಸೇರಿಸುವ ಅಗತ್ಯವಿದೆ ಎಂದು ರಮೇಶ್ ಹೇಳಿದ್ದಾರೆ. ರಾಜ್ಯಗಳಲ್ಲಿ ಭೂ ದಾಖಲೆಗಳ ಆಧುನೀಕರಣ ಕಾರ್ಯ ತುಂಬಾ ನಿಧಾನವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.