ಚನ್ನರಾಯಪಟ್ಟಣ: ಭೂಕಂಪನದ ಅಧ್ಯಯನ ನಡೆಸಲು ಜಿಲ್ಲೆಗೆ ಬಂದಿರುವ ಹೈದರಾಬಾದ್ನ ಎನ್ಜಿಆರ್ಐ (ನ್ಯಾಷನಲ್ ಜಿಯೊಫಿಸಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್) ಸಂಸ್ಥೆ ಪ್ರತಿನಿಧಿಗಳು ಸೋಮವಾರ ತಹಶೀಲ್ದಾರ್ ಅವರನ್ನು ಸೋಮವಾರ ಭೇಟಿ ಮಾಡಿ ಚರ್ಚೆ ನಡೆಸಿದರು.
ಭೂಕಂಪ ಅಧ್ಯಯನಕ್ಕಾಗಿ ಪಟ್ಟಣಕ್ಕೆ ಬಂದಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರು ಭಾನುವಾರ ಘೇರಾವ್ ಹಾಕಿದ ಹಿನ್ನೆಲೆಯಲ್ಲಿ ಸೋಮವಾರ ತಹಶೀಲ್ದಾರ್ ಜತೆ ಈ ಮಾತುಕತೆ ನಡೆಸಿದರು. ಗ್ರಾಮಸ್ಥರಿಗೆ ಸಂಪೂರ್ಣ ಮಾಹಿತಿ ನೀಡಿಯೇ ಮುಂದಿನ ಕಾರ್ಯಾಚರಣೆ ಮಾಡುತ್ತೇವೆ ಎಂದು ತಿಳಿಸಿದರು.
ಸಂಸ್ಥೆಯು 40 ವರ್ಷಗಳಿಂದ ದೇಶದ ಅನೇಕ ಭಾಗದಲ್ಲಿ ಭೂಕಂಪನದ ಪರಿಣಾಮ ತಿಳಿಯಲು ಕೊಳವೆ ಬಾವಿ ಕೊರೆದು ಸ್ಫೋಟಿಸಿದೆ. ಈ ಸ್ಫೋಟದಿಂದ ಅಂತರ್ಜಲ, ಮನೆಗಳು, ಕಟ್ಟಡಗಳಿಗೆ ಹಾನಿಯಾಗುವುದಿಲ್ಲ. ಎಲ್ಲಿಯೂ ಹಾನಿ ಸಂಭವಿಸಿದ ಉದಾಹರಣೆ ಇಲ್ಲ ಎಂದು ತಹಶೀಲ್ದಾರ್ ಗಮನಕ್ಕೆ ತಂದರು.
ತಹಶೀಲ್ದಾರ್ ಬಿ.ಎನ್. ವರಪ್ರಸಾದ ರೆಡ್ಡಿ ಮಾತನಾಡಿ, ಸಂಸ್ಥೆಯ ಅಧಿಕಾರಿಗಳು, ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಳವೆ ಬಾವಿ ಕೊರೆಯಬೇಕಿತ್ತು. ಆದರೆ ಸಂಪರ್ಕದ ಕೊರತೆಯಿಂದ ಈ ರೀತಿಯಾಗಿದೆ. ತಾಲ್ಲೂಕಿನಲ್ಲಿ ಹೊನ್ನಶೆಟ್ಟಿಹಳ್ಳಿ, ಪೋತನಹಳ್ಳಿ, ಕುಂಬೇನಹಳ್ಳಿ, ಕಾಚೇನಹಳ್ಳಿ ಗ್ರಾಮದಲ್ಲಿ ಕೊಳವೆಬಾವಿ ಕೊರೆಯುವುದರಿಂದ ಭೂಗರ್ಭದಲ್ಲಿರುವ ಖನಿಜ ಸಂಪತ್ತು ತಿಳಿಯಲು ಅನುಕೂಲವಾಗಲಿದೆ. ನೀರಿನ ಸೆಲೆಗಳಿಗೆ ಯಾವುದೇ ಕಾರಣಕ್ಕೂ ಹಾನಿಯಾಗದು. ಸ್ಫೋಟ ನಡೆಸಿದ ನಂತರ ಗುಂಡಿಗೆ ಮುಚ್ಚಳ ಅಳವಡಿಸಲು ಅಧಿಕಾರಿಗಳು ಒಪ್ಪಿದ್ದಾರೆ ಎಂದು ಹೇಳಿದರು.
ಮಂಗಳವಾರ ಮಧ್ಯಾಹ್ನ ಹೊನ್ನಶೆಟ್ಟಿ ಗ್ರಾಮಕ್ಕೆ ತೆರಳಿ ಸ್ಫೋಟದ ಪರಿಣಾಮಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಕೊಟ್ಟ ನಂತರ ಮುಂದಿನ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಶ್ರವಣಬೆಳಗೊಳ ಐತಿಹಾಸಿಕ ಕೇಂದ್ರವಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ನಿಯಮದ ಪ್ರಕಾರ ಬೆಟ್ಟದ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಸ್ಫೋಟ ನಡೆಸುವುಂತಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.