ಆಲಮಟ್ಟಿ (ವಿಜಾಪುರ ಜಿಲ್ಲೆ): ಮಲಘಾಣದಲ್ಲಿ ಒಂದೇ ವರ್ಷದಲ್ಲಿ 25 ಬಾರಿ ಭೂಕಂಪವಾಗಿದ್ದು, ಮಲಘಾಣ ಸುತ್ತಮುತ್ತಲಿನ ಪ್ರದೇಶದ ಅಧ್ಯಯನ, ಜನತೆ ಹಾಗೂ ಅಧಿಕಾರಿಗಳ ಜೊತೆ ಸಂವಾದ ನಡೆಸಲು ಉನ್ನತ ಮಟ್ಟದ ಅಧ್ಯಯನ ಸಮಿತಿಯೊಂದು ಫೆ. 14ರಂದು ವಿಜಾಪುರ ಜಿಲ್ಲೆಗೆ ಆಗಮಿಸಲಿದೆ.
“ಕಳೆದ ವರ್ಷ ಮೇ ತಿಂಗಳಿನಲ್ಲಿಯೇ ವಿಜ್ಞಾನಿಗಳ ತಂಡ ಭೂಕಂಪ ಬಾಧಿತ ಸ್ಥಳಕ್ಕೆ ತೆರಳಿ ಸೂಕ್ತ ಅಧ್ಯಯನ ನಡೆಸಿದೆ.
ಅದಾಗ್ಯೂ ಮೇಲಿಂದ ಮೇಲೆ ಭೂಕಂಪ ಸಂಭವಿಸುತ್ತಿದೆ. ಈ ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಭೂಕಂಪನದ ಕಾರಣದ ಬಗ್ಗೆ ತಜ್ಞರು ಅಧ್ಯಯನ ನಡೆಸಿ ಘಟನೆಯ ಸತ್ಯಾಸತ್ಯತೆ ತಿಳಿಸಲಿದ್ದಾರೆ” ಎಂದು ಕರ್ನಾಟಕ ಪ್ರಕೃತಿ ವಿಕೋಪ ಕೇಂದ್ರದ ನಿರ್ದೇಶಕ ಡಾ. ಪ್ರಕಾಶ ಅವರು ‘ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದ್ದಾರೆ.
ಜನರ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜಿಲ್ಲಾಡಳಿತ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಸುಮಾರು 14 ಜನರನ್ನೊಳಗೊಂಡ ಉನ್ನತ ಮಟ್ಟದ ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿಸಲಿದೆ.