ಬಾಗಲಕೋಟೆ:ಜಿಲ್ಲೆಯಾದ್ಯಂತ ಬುಧವಾರ ಕೃಷಿಕರು ಭೂತಾಯಿಗೆ ಚರಗ ಚೆಲ್ಲುವ ಮೂಲಕ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಕಡಬು, ಹೋಳಿಗೆ, ತುಪ್ಪ, ಕಾಳುಪಲ್ಲೆ, ರೊಟ್ಟಿ, ಚಟ್ನಿ, ಮೊಸರು, ಎಣಗಾಯಿ ಸೇರಿದಂತೆ ವೈವಿಧ್ಯಮಯ ಅಡುಗೆ ತಯಾರಿಸಿಕೊಂಡು ಕುಟುಂಬ, ಬಂಧು ಬಳಗ, ಸ್ನೇಹಿತರೊಡಗೂಡಿ ಅಲಂಕೃತಗೊಂಡ ಎತ್ತಿನ ಬಂಡಿಯೇರಿ ಹೊಲಕ್ಕೆ ತೆರಳಿ ಭೂತಾಯಿಗೆ ನಮಿಸಿ ಸಾಮೂಹಿಕವಾಗಿ ಊಟ ಸವಿದರು.
ಜಿಲ್ಲೆಯಲ್ಲಿ ಈ ವರ್ಷ ಹಿಂಗಾರು ಫಸಲು ಉತ್ತಮವಾಗಿರುವುದರಿಂದ ಹಬ್ಬದ ಸಂಭ್ರಮ ಇಮ್ಮಡಿಯಾಗಿತ್ತು. ಹೊಸ ವರ್ಷಾಚರಣೆ: ಬುಧವಾರ ಜಿಲ್ಲೆಯಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಮಂಗಳವಾರ ರಾತ್ರಿ ವರ್ಷಾಚರಣೆ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಔತಣಕೂಟಗಳು ನಡೆದವು. ರಾತ್ರಿ 12 ಗಂಟೆಯಾಗುತ್ತಿದ್ದಂತೆ ಜನರು ಬಣ್ಣಬಣ್ಣದ ಪಟಾಕಿಗಳನ್ನು ಸಿಡಿಸಿ, ಕೇಕೆಹಾಕಿ ಸಂಭ್ರಮಿಸಿದರು.
ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹಾಗೂ ಮೊಬೈಲ್ನಲ್ಲಿ ಎಸ್ಎಂಎಸ್ ಸಂದೇಶಗಳನ್ನು ಕಳುಹಿಸುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಕೋರುವ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು. ನೂತನ ವರ್ಷ ಸ್ವಾಗತಿಸುವ ಸಂದರ್ಭದಲಿ್ಲ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದರು.