ನವದೆಹಲಿ (ಐಎಎನ್ಎಸ್): `ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಅವರು ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ಬೆಲೆಗೆ ಖರೀದಿಸ್ದ್ದಿದ ಭೂಮಿ ಯನ್ನು ಭಾರಿ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಂಡಿದ್ದಾರೆ~ ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
`ವಾದ್ರಾ ಅವರು ಗುಡಗಾಂವ್ ಮತ್ತಿತರ ಕಡೆ ಚಿಕ್ಕಾಸಿಗೆ ಖರೀದಿಸಿದ್ದ ನೂರಾರು ಕೋಟಿ ರೂಪಾಯಿ ಮೌಲ್ಯದ ಜಮೀನುಗಳನ್ನು ಭಾರಿ ಬೆಲೆಗೆ ಮಾರಾಟ ಮಾಡಿದ್ದಾರೆ~ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇದಕ್ಕೆ ಸಾಕ್ಷಿಯಾಗಿ ಅವರು ಸಂಬಂಧಪಟ್ಟ ದಾಖಲೆಗಳ ಪ್ರತಿಗಳನ್ನು ತೋರಿಸಿ, `ಕಳೆದ ನಾಲ್ಕು ವರ್ಷಗಳಲ್ಲಿ ವಾದ್ರಾ ಅವರು ದೆಹಲಿ ಸುತ್ತ ಕನಿಷ್ಠ 31 ಕಡೆ ಜಮೀನುಗಳನ್ನು ಖರೀದಿ ಮಾಡಿದ್ದಾರೆ~ ಎಂದರು.
ಕಾಂಗ್ರೆಸ್ ನಕಾರ: ಆದರೆ ಈ ಆರೋಪವನ್ನು ಕಾಂಗ್ರೆಸ್ ಅಲ್ಲಗಳೆದಿದೆ. `ಇದು ಸುಳ್ಳು ಆರೋಪ~ ಎಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಕೆ. ತ್ರಿಪಾಠಿ ಹೇಳಿದ್ದಾರೆ. `ದೆಹಲಿ ಸರ್ಕಾರವು ಖಾಸಗಿಯವರಿಗೆ ಜಮೀನು ಮಾರಾಟ ಮಾಡಿಲ್ಲ~ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪುರಾವೆ ಎಲ್ಲಿದೆ?: `ವಾದ್ರಾ ಅವರ ವಿರುದ್ಧ ಮಾಡಿರುವ ಆರೋಪಗಳಿಗೆ ಕೇಜ್ರಿವಾಲ್ ಪುರಾವೆಗಳನ್ನು ನೀಡಬೇಕು~ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವೆ ಅಂಬಿಕಾ ಸೋನಿ ಶ್ರೀನಗರದಲ್ಲಿ ಹೇಳಿದ್ದಾರೆ.
`ರಾಜಕೀಯ ಪಕ್ಷ ಆರಂಭಿಸಿರುವ ಕೇಜ್ರಿವಾಲ್ ಅವರು ದೆಹಲಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ರಾಜಧಾನಿಯಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ವಾದ್ರಾ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ~ ಎಂದೂ ಅವರು ದೂರಿದ್ದಾರೆ.
ತನಿಖೆಗೆ ಬಿಜೆಪಿ ಆಗ್ರಹ: ಕೇಜ್ರಿವಾಲ್ ಅವರು ವಾದ್ರಾ ವಿರುದ್ಧ ಮಾಡಿರುವ ಆರೋಪಗಳ ತನಿಖೆ ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ.