ಒಂದು ವರ್ಷದ ಹಿಂದೆ ಆರಂಭವಾಗಿದ್ದ `ಈ ಭೂಮಿ ಆ ಬಾನು' ಚಿತ್ರ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರಮಂದಿರಗಳ ಕೊರತೆಯಿಂದ ಕೇವಲ 25 ಸೆಂಟರ್ಗಳಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ವಾರ ಥಿಯೇಟರ್ಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಹೇಳಿದರು ನಿರ್ಮಾಪಕ ಮಲ್ಲಿಕಾರ್ಜುನ್. ಅವರು ಸರ್ಕಾರಿ ಅಧಿಕಾರಿ. ಸಿನಿಮಾರಂಗದ ಮೇಲಿನ ವ್ಯಾಮೋಹದಿಂದ ಸಿನಿಮಾ ನಿರ್ಮಾಣಕ್ಕೆ ಇಳಿದವರು.
`ಸಿನಿಮಾದಲ್ಲಿ `ಹೆಣ್ಣು ಸಬಲೆ' ಎಂಬ ಸಂದೇಶವನ್ನು ನಿರ್ದೇಶಕ ವೇಣುಗೋಪಾಲ್ ಸಮರ್ಥವಾಗಿ ನಿಭಾಯಿಸಿದ್ದಾರೆ' ಎಂದು ಪ್ರಶಂಸಿಸಿದ ನಿರ್ಮಾಪಕರು, ಕುಟುಂಬ ಸಮೇತ ಕುಳಿತು ನೋಡಬಹುದಾದ ಇಂಥ ಸದಭಿರುಚಿಯ ಸಿನಿಮಾಗಳನ್ನು ವರ್ಷಕ್ಕೊಂದರಂತೆ ನಿರ್ಮಿಸುವ ಉದ್ದೇಶ ತಮ್ಮದು ಎಂದರು. ಅಂದಹಾಗೆ ಚಿತ್ರದ ಹಾಡೊಂದನ್ನು ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಅವರಿಂದ ಬರೆಸಿರುವ ಮಲ್ಲಿಕಾರ್ಜುನ್, ಅದನ್ನು ಖುಷಿಯಿಂದ ಹೇಳಿಕೊಂಡರು.
ನಿರ್ದೇಶಕ ವೇಣುಗೋಪಾಲ್ ಅವರಿಗೆ ಚಿತ್ರದಲ್ಲಿ ಹೆಣ್ಣಿನ ಸಬಲತೆಯನ್ನು ಸಶಕ್ತವಾಗಿ ತೋರಿಸಿರುವುದು ಖುಷಿ ನೀಡಿದೆ. ನಾಯಕ ಅಜಿತ್ ಅಭಿನಯವನ್ನು ಪ್ರಶಂಸಿಸಿದ ಅವರು ನಾಯಕಿ ಶರಣ್ಯ, ಭಾಷೆ ಬಾರದಿದ್ದರೂ ಭಾವನೆಗಳನ್ನು ಅರ್ಥೈಸಿಕೊಂಡು ನಟಿಸಿದ ಅನುಭವ ಮೆಲುಕು ಹಾಕಿದರು. ಶರಣ್, ಮಿತ್ರ ಮುಂತಾದವರ ಹಾಸ್ಯ ಸನ್ನಿವೇಶವೂ ಚಿತ್ರದ ತೂಕವನ್ನು ಹೆಚ್ಚಿಸಿದೆಯಂತೆ. ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಪ್ರೇಕ್ಷಕರೇ ಫಲಿತಾಂಶ ನೀಡುತ್ತಾರೆ ಎಂಬಷ್ಟಕ್ಕೆ ಅವರ ಮಾತು ಮುಗಿಯಿತು.ನಾಯಕ ಅಜಿತ್ ಅವರಿಗೂ ಸಿನಿಮಾದಲ್ಲಿ ನಟಿಸಿದ್ದು ಖುಷಿ ನೀಡಿದೆ. ನಾಯಕಿ ಶರಣ್ಯ ಹಾಜರಿ ಇರಲಿಲ್ಲ.