ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಮಾರಾಟ; ನಾಯಕ್ ಸ್ಪಷ್ಟನೆ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪೂರ್ವ ತಾಲ್ಲೂಕಿನ ಪಟ್ಟಂದೂರು ಅಗ್ರಹಾರದ ಸರ್ವೇ ನಂಬರ್ 42ರಲ್ಲಿ 3.23 ಎಕರೆ ಸರ್ಕಾರಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಹಳ ಹಿಂದೆಯೇ `ಜಾಯ್ ಐಸ್‌ಕ್ರೀಂ ಕಂಪೆನಿ~ಗೆ ಮಾರಾಟ ಮಾಡಿದ್ದು, ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್ ಸ್ಪಷ್ಟಪಡಿಸಿದ್ದಾರೆ.

2007ರ ಜನವರಿ 27ರಂದು ಕೆಐಎಡಿಬಿ ಈ ಜಾಗವನ್ನು ಜಾಯ್ ಐಸ್‌ಕ್ರೀಂ ಕಂಪೆನಿಗೆ ಮಾರಾಟ ಮಾಡಿ ಕ್ರಯಪತ್ರವನ್ನು ನೀಡಿದೆ. ಇದಾದ ನಂತರ 2008ರ ಆಗಸ್ಟ್ 30ರಂದು ಜಾಯ್ ಐಸ್‌ಕ್ರೀಂ ಕಂಪೆನಿಯು ಈ ಜಾಗವನ್ನು ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ಸ್ ಕಂಪೆನಿಗೆ ಮಾರಾಟ ಮಾಡಿದೆ.

ಭೂಮಿ ಮಾರಾಟ ಮಾಡುವಾಗ ನಿರ್ಬಂಧ ಹಾಕಿರುವುದು ನಿಜ. ಆದರೆ ಈ ವಿಷಯದ ಬಗ್ಗೆ ವಿವಾದ ಉಂಟಾದಾಗ ಕಳೆದ ಅಕ್ಟೋಬರ್ 28ರಂದು ಸರ್ಕಾರಕ್ಕೆ ಪತ್ರ ಬರೆದು ವಿವರಣೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆ, `ಜಿಲ್ಲಾಧಿಕಾರಿಗಳ ಕಚೇರಿ ಹಂತದಲ್ಲಿಯೇ ನಿರ್ಬಂಧವನ್ನು ಹಾಕಲಾಗಿದೆ. ನೀವೇ ತೆಗೆದು ಹಾಕಿ~ ಎಂದು ತಿಳಿಸಿತ್ತು ಎಂದು ಅವರು ವಿವರಿಸಿದ್ದಾರೆ.

`ಹಾಗೆ ನೋಡಿದರೆ 1964ರ ಕರ್ನಾಟಕ ಭೂ ಮಂಜೂರಾತಿ ಕಾಯ್ದೆ ಸೆಕ್ಷನ್ 28ರ ಪ್ರಕಾರ ಭೂಮಿ ಮಾರಾಟ ಮಾಡಿ ಕ್ರಯಪತ್ರ ನೀಡಿದ ನಂತರ ನಿರ್ಬಂಧ ಹಾಕಲು ಬರುವುದಿಲ್ಲ. ಈ ವಿಷಯವನ್ನೇ ಕಳೆದ ತಿಂಗಳ 4ರಂದು ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದೇನೆ~ ಎಂದು ಅವರು ಸಮರ್ಥಿಸಿಕೊಂಡರು.

ಕಳೆದ ಡಿಸೆಂಬರ್ ಒಂದರಂದು ನಗರ ವಿಶೇಷ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಅದಾದ ನಂತರ ಈ ವಿಷಯದಲ್ಲಿ ತಾವು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.`ಭೂ ಕಬಳಿಕೆಗೆ ವಿಶೇಷ ಜಿಲ್ಲಾಧಿಕಾರಿ ಬೆಂಬಲ~ ಎಂಬ ಶೀರ್ಷಿಕೆಯಲ್ಲಿ ಇದೇ 13ರ `ಪ್ರಜಾವಾಣಿ~ಯಲ್ಲಿ ಬಂದಿರುವ ವಿಶೇಷ ವರದಿಗೆ ನಾಯಕ್ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT