ಕಾರವಾರ: ವಸತಿ ಯೋಜನೆಗಾಗಿ ತಾಲ್ಲೂಕಿನ ಚಿತ್ತಾಕುಲ ಗ್ರಾಮದ ಸರ್ವೆ ಸಂಖ್ಯೆ 808-1194ರಲ್ಲಿ ಸುಮಾರು 54 ಎಕರೆ 6 ಗುಂಟೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳುವುದನ್ನು ಕರ್ನಾಟಕ ಗೃಹ ಮಂಡಳಿ ಕೈಬಿಟ್ಟಿರುವುದನ್ನು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸ್ವಾಗತಿಸಿದೆ.
ಈ ಕುರಿತು ಸಮಿತಿಯ ಗೌರವಾಧ್ಯಕ್ಷ, ವಕೀಲ ಕೆ.ಆರ್.ದೇಸಾಯಿ ಮಾಹಿತಿ ನೀಡಿದರು. 'ವಸತಿ ಯೋಜನೆಗಾಗಿ ಕೆಎಚ್ಬಿಯು ಬಡವರ, ಸಣ್ಣ ಹಿಡುವಳಿದಾರರ ಜಮೀನುಗಳನ್ನು ವಶಪಡಿಸಿಕೊಂಡಿದಿದ್ದರೆ ಅವರ ಬದುಕು ಅತಂತ್ರವಾಗುತ್ತಿತ್ತು. ಭೂಸ್ವಾಧೀನ ಪ್ರಕ್ರಿಯೆಯಿಂದ ಜಮೀನು ಕೈಬಿಟ್ಟಿರುವುದು ಅವರಿಗೆ ಸಂತಸ ತಂದಿದೆ' ಎಂದರು.
`ಯೋಜನೆಗಾಗಿ ಇದ್ದ ಮನೆಗಳನ್ನು ನೆಲಸಮಗೊಳಿಸಿ ಆ ಪ್ರದೇಶದಲ್ಲಿ ಬೇರೆ ಮನೆಗಳನ್ನು ನಿರ್ಮಿಸುವುದು ನ್ಯಾಯವಲ್ಲ. ಇದು ವ್ಯಕ್ತಿಯ ಜೀವಿಸುವ ಹಕ್ಕನ್ನು ಕಸಿದುಕೊಂಡಂತೆ. ಈ ಕಾರಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಬಾರದು ಎಂದು ಸಮಿತಿಯ ನೇತೃತ್ವದಲ್ಲಿ ಸಂತ್ರಸ್ತರು ಹೋರಾಟ ನಡೆಸಿದ್ದರು. ಈ ಹೋರಾಟಕ್ಕೆ ಫಲ ಸಿಕ್ಕಿದೆ' ಎಂದು ಅವರು ಹೇಳಿದರು.
`ಗೃಹ ಮಂಡಳಿಯ ನಿರ್ಧಾರದಿಂದಾಗಿ ಆ ಭಾಗದ ಜನರು ಉತ್ತಮ ಜೀವನ ನಡೆಸಿಕೊಂಡು ಹೋಗಲು ಅನುಕೂಲವಾಗಿದೆ. ಅವರ ಬದುಕಿನಲ್ಲಿ ಕವಿದ ಕಾರ್ಮೋಡಗಳು ಸರಿದಿವೆ' ಎಂದು ದೇಸಾಯಿ ಸಂತಸ ವ್ಯಕ್ತಪಡಿಸಿದರು. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟಕ್ಕೆ ವೇದಿಕೆ ಬೆಂಬಲ ನೀಡಿತ್ತು. ಹೋರಾಟಕ್ಕೆ ಯಶಸ್ಸು ಸಿಕ್ಕಿದೆ ಎಂದರು.
`ಹಬ್ಬುವಾಡದಲ್ಲಿರುವ ಕೆಎಚ್ಬಿ ಕಾಲೊನಿಯ ನಿವಾಸಿಗಳು ಮೂಲಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಗೃಹ ಮಂಡಳಿ ಮೊದಲು ಇದ್ದ ಕಾಲೊನಿಗಳನ್ನು ಸುಸ್ಥಿತಿಯಲ್ಲಿಡುವ ಗಮನ ನೀಡಬೇಕು' ಎಂದರು.
ಸಮಿತಿಯ ಕಾನೂನು ಸಲಹೆಗಾರ ಜಯರಾಮ ಪರವಾರ, ಸಂಬಾಜಿ ನಾಯ್ಕ, ಮಾರುತಿ ಗಜೀನಕರ್, ಕೊಸ್ತಾನ್ ಬಾರ್ಬೊಜಾ, ಗ್ರೇಸಿ ಕಾರ್ಡೊನಾ, ಮೇರಿ ಅಲ್ಪಾನ್ಸೊ, ರಂಜನಾ ವಾಗಳೇಕರ್, ಜೋತಿ ನಾಯ್ಕ ಹಾಜರಿದ್ದರು.