ನವದೆಹಲಿ (ಪಿಟಿಐ): ಭೂಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಡಪಕ್ಷಗಳು, ಮಸೂದೆಯ ಪ್ರಮುಖ ಕಲಂಗಳ ಬಗ್ಗೆ ತಮ್ಮ ವಿರೋಧವಿದೆ ಎಂದು ತಿಳಿಸಿವೆ.
ಸಿಪಿಎಂ, ಸಿಪಿಐ, ಆರ್ಎಸ್ಪಿ ಮತ್ತು ಫಾರ್ವರ್ಡ್ ಬ್ಲಾಕ್ ಪಕ್ಷಗಳ ಮುಖಂಡರು ಸಭೆ ಸೇರಿ ಮಸೂದೆಯಲ್ಲಿಯ ಲೋಪದೋಷಗಳ ಬಗ್ಗೆ ಚರ್ಚೆ ನಡೆಸಿದರು. ಉದ್ದೇಶಿತ ಮಸೂದೆಯ ವ್ಯಾಪ್ತಿಯಿಂದ ಭಾರತೀಯ ರೈಲ್ವೆ ಕಾಯ್ದೆ, ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಸೇರಿದಂತೆ 13 ಕಾಯ್ದೆಗಳನ್ನು ಹೊರಗಿಡಲಾಗಿದೆ. ಇದು ಸರಿಯಲ್ಲ ಎಂಬುದು ಎಡಪಕ್ಷಗಳ ವಾದವಾಗಿದೆ.
ಸಚಿವರ ಸ್ಪಷ್ಟನೆ: ಭೂಮಿ ಬಿಟ್ಟುಕೊಡುವವರಿಗೆ ನ್ಯಾಯಸಮ್ಮತವಾದ ಪರಿಹಾರ ದೊರಕಬೇಕು ಮತ್ತು ಕೈಗಾರಿಕೆಗಳಿಂದ ದೂರುಗಳು ಬರಬಾರದು ಎಂಬ ಉದ್ದೇಶದಿಂದ ಭೂಸ್ವಾಧೀನ ಮಸೂದೆಯ ವಿಚಾರದಲ್ಲಿ ಸರ್ಕಾರ ಒಂದು ರೀತಿಯ ರಾಜೀ ಮನೋಭಾವನೆಯನ್ನು ತೋರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ತಿಳಿಸಿದ್ದಾರೆ.
2011ರ ಸೆಪ್ಟೆಂಬರ್ 5ರಂದು ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಮೂಲ ಮಸೂದೆಯ ಬಗ್ಗೆ ಭಾರಿ ಭಿನ್ನಾಭಿಪ್ರಾಯವಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ಜತೆ ಚರ್ಚಿಸಿ ಎಲ್ಲರಿಗೂ ಒಪ್ಪಿಗೆಯಾಗುವಂತಹ ಅಂಶಗಳನ್ನು ಪರಿಷ್ಕೃತ ಮಸೂದೆಯಲ್ಲಿ ಸೇರಿಸಲಾಗಿದೆ. ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.