ನವದೆಹಲಿ (ಪಿಟಿಐ): ಉತ್ತರ ಪ್ರದೇಶ ವಿಧಾಸಭಾ ಚುನಾವಣೆಗೆ ಮುನ್ನ ಭೂಸ್ವಾಧೀನ ಮಸೂದೆಯನ್ನು ಅಂತಿಮಗೊಳಿಸಲು ರಾಹುಲ್ ಗಾಂಧಿ ಅವರೇನೋ ತುದಿಗಾಲ ಮೇಲೆ ನಿಂತಿರಬಹುದು; ಆದರೆ, ಗ್ರಾಮೀಣಾಭಿವೃದ್ಧಿ ಸಚಿವಾಲಯ ತರಾತುರಿಯಲ್ಲಿ ಸಿದ್ಧಪಡಿಸಿದ ಈ ಮಸೂದೆಯಲ್ಲಿ `ಹಲವಾರು ನ್ಯೂನತೆಗಳು~ ಇರುವ ಕಾರಣ ಇದು ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಪಡೆಯಲು ವಿಫಲವಾಯಿತು.
ಸರ್ಕಾರದ ಈ ವೈಫಲ್ಯಕ್ಕೆ ಮಸೂದೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ವರದಿ ವಿಳಂಬವಾಗಿದ್ದೂ ಒಂದು ಕಾರಣ ಎಂದು ಮೂಲಗಳು ತಿಳಿಸಿವೆ.
`2011ರ ಭೂಸ್ವಾಧೀನ, ಪುನರ್ವಸತಿ ಹಾಗೂ ಪರಿಹಾರ ಮಸೂದೆಗೆ ಸಂಬಂಧಿಸಿದಂತೆ ಸರ್ಕಾರ ಎಲ್ಲ ರಾಜ್ಯಗಳ ಜತೆ ಸಮಾಲೋಚನೆ ಪೂರ್ಣಗೊಳಿಸಿರಲಿಲ್ಲ. ತರಾತುರಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಇದೀಗ ಸ್ಥಾಯಿ ಸಮಿತಿ ಎಲ್ಲ ರಾಜ್ಯಗಳ ಅನಿಸಿಕೆಯನ್ನು ಪಡೆಯುತ್ತಿದೆ. ಇದಕ್ಕೆ ಸಮಯ ಬೇಕಾಗುತ್ತದೆ~ ಎಂದು ಮೂಲಗಳು ಹೇಳಿವೆ.
`ಮಸೂದೆಯನ್ನು ಅಂತಿಮಗೊಳಿಸುವುದಕ್ಕೆ ಮುನ್ನ ಅಭಿಪ್ರಾಯಗಳನ್ನು ತಿಳಿಸಲು ರಾಜ್ಯಗಳಿಗೆ ಸಾಕಷ್ಟು ಕಾಲಾವಕಾಶ ಕೊಡಲಾಗಿತ್ತು.
ಆದರೆ ರಾಜ್ಯಗಳಿಂದ ಕಾಲಮಿತಿಯಲ್ಲಿ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದೀಗ ಸ್ಥಾಯಿ ಸಮಿತಿಗೆ ರಾಜ್ಯಗಳು ಪ್ರತಿಕ್ರಿಯಿಸುತ್ತಿವೆ~ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಬಿಜೆಪಿ ಸಂಸದರಾದ ಸುಮಿತ್ರಾ ಮಹಾಜನ್ ಅಧ್ಯಕ್ಷತೆಯ ಸಂಸದೀಯ ಸಮಿತಿಯು ಈ ಮಸೂದೆಯನ್ನು ಪರಾಮರ್ಶಿಸಲು ಮುಂದಿನ ತಿಂಗಳು ಎರಡು ಬಾರಿ ಸಭೆ ಸೇರುವ ಸಾಧ್ಯತೆ ಇದೆ. ಜೈರಾಂ ರಮೇಶ್ ಅವರು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹೊಣೆಗಾರಿಕೆ ವಹಿಸಿಕೊಂಡ 55 ದಿನಗಳಲ್ಲಿ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ.
ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡನೆಯಾದ ಈ ಮಸೂದೆಯು ಈ ವರ್ಷದ ಬಜೆಟ್ ಅಧಿವೇಶನಕ್ಕೆ ಮುನ್ನ ಅಂತಿಮಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.