ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಇತ್ತೀಚೆಗೆ ಇಸ್ಲಾಂ ವಿರುದ್ಧ ಮಾತನಾಡಿದ್ದಾರೆ. ಇದರಿಂದ ಬಹಳ ಆಶ್ಚರ್ಯವಾಯಿತು. ‘ಮುಸ್ಲಿಂ ಧರ್ಮವನ್ನು ಒಪ್ಪದೇ ಇರುವವರನ್ನು ಕೊಲ್ಲಬೇಕು ಎಂದು ಕುರಾನ್ ಧರ್ಮಗ್ರಂಥದಲ್ಲಿ ೨೩ ಕಡೆ ಉಲ್ಲೇಖಿಸಲಾಗಿದೆ.
ಹೀಗಿರುವಾಗ ಈ ಧರ್ಮವನ್ನು ಹಿಂದೂ ಧರ್ಮಕ್ಕೆ ಹೋಲಿಸುವುದು ನ್ಯಾಯವೇ’ ಎಂದು ಕೇಳಿದ್ದಾರೆ. ಇದು ತುಂಬ ಕಠೋರ ಅಭಿಪ್ರಾಯ. ಕೂಡಲೇ ಸ್ಪಷ್ಟೀಕರಣ ಕೊಟ್ಟು ಗೊಂದಲ ನಿವಾರಿಸಬೇಕು.
ಆರ್ಎಸ್ಎಸ್ನ ಎಂ.ಎಸ್. ಗೊಳ್ವಾಲ್ಕರ್ ಅವರು ಎಲ್ಲಾ ಧರ್ಮಗಳನ್ನು ಹೊಗಳಿದ್ದಾರೆ. ಎಲ್ಲೂ ಕುರಾನ್ ಬಗ್ಗೆ ಟೀಕೆ ಮಾಡಿಲ್ಲ. ಸಂಘದ ಹಿರಿಯ ನಾಯಕ ದಿವಂಗತ ಸುದರ್ಶನ್ ಅವರು ನನ್ನೊಡನೆ ಅನೇಕ ಸಲ ಕುರಾನ್ ಮತ್ತು ಪ್ರವಾದಿಯವರ ಬಗ್ಗೆ ಚರ್ಚಿಸಿದ್ದಾರೆ, ಪ್ರಶಂಸಿಸಿದ್ದಾರೆ. ತಾಲಿಬಾನರನ್ನು ಇಸ್ಲಾಂ ವಿರೋಧಿಗಳೆಂದು ಮುಸ್ಲಿಮರೇ ಹೇಳುತ್ತಾರೆ.
ಪಾಕಿಸ್ತಾನದಲ್ಲಿ ನಿತ್ಯ ಅನೇಕ ಮಸೀದಿಗಳ ಮೇಲೆ ಬಾಂಬ್ ಹಾಕುವವರು ಆತಂಕವಾದಿಗಳು. ಇದಕ್ಕೆ ಇಸ್ಲಾಂ ಧರ್ಮವನ್ನು ಟೀಕಿಸುತ್ತೀರಾ ಅಥವಾ ವ್ಯಕ್ತಿಗಳ ಮೇಲೆ ಪ್ರಹಾರ ಮಾಡುತ್ತೀರಾ? ಹಿಂದೂ ಧರ್ಮವನ್ನು ಇಂದು ಹಿಂದೂಗಳೇ ಅವಮಾನಕ್ಕೆ ಗುರಿ ಮಾಡುತ್ತಿದ್ದಾರೆ.
ಅಸ್ಪೃಶ್ಯತೆಯೆಂಬ ಪಿಡುಗು ಹಿಂದೂ ಧರ್ಮದಲ್ಲಿದೆಯೇ? ಜಾತಿ ಪದ್ಧತಿಯನ್ನು ಹಿಂದೂ ಧರ್ಮವು ಸ್ಥಾಪಿಸಿದೆಯೇ? ಯಾರೋ ಕೆಲವರು ಈ ಅನಿಷ್ಟ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ಧರ್ಮವನ್ನು ಟೀಕಿಸುವುದು ಸರಿಯೇ?
ಎಲ್ಲಾ ಧರ್ಮಗಳಲ್ಲಿ ಒಳ್ಳೆಯದನ್ನೇ ಕಾಣುತ್ತೇವೆ. ಎಲ್ಲಾ ಧರ್ಮಗಳಲ್ಲಿ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಕೆಟ್ಟವರನ್ನು ಕಂಡು ಅವರ ಧರ್ಮವನ್ನು ಟೀಕಿಸುವುದು ಸರಿಯೇ?