ನವದೆಹಲಿ (ಐಎಎನ್ಎಸ್): ಪುಣೆ ನಗರದಲ್ಲಿ ರಕ್ಷಣಾ ಇಲಾಖೆಗೆ ಸೇರಿದ್ದ ಭೂಮಿಯನ್ನು ಭೋಗ್ಯಕ್ಕೆ ನೀಡುವಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಇಬ್ಬರು ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಸಿಬಿಐ ಬುಧವಾರ ಮೊಕದ್ದಮೆ ದಾಖಲಿಸಿದೆ.
ದಕ್ಷಿಣ ಸೇನಾ ಕಮಾಂಡರ್ ಆಗಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ನೊಬೆಲ್ ತಂಬುರಾಜ್, ಪುಣೆ ವೃತ್ತದ ಸೇನಾ ಎಸ್ಟೇಟ್ ಅಧಿಕಾರಿಯಾಗಿದ್ದ ಎಸ್.ಆರ್.ನಯ್ಯರ್, ಪುಣೆ ಮೂಲದ ಒಬ್ಬ ಕಟ್ಟಡ ನಿರ್ಮಾಣಗಾರ ಹಾಗೂ ಇತರರು ಆರೋಪಿಗಳಲ್ಲಿ ಸೇರಿದ್ದಾರೆ.
ರಕ್ಷಣಾ ಸಚಿವಾಲಯ ನೀಡಿದ್ದ ದೂರನ್ನು ಆಧರಿಸಿ ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಿಸಿರುವುದಾಗಿ ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.
ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ನಿಯಮಬಾಹಿರವಾಗಿ ಭೋಗ್ಯಕ್ಕೆ ನೀಡುವ ಮೂಲಕ ಕಟ್ಟಡ ನಿರ್ಮಾಣಗಾರನಿಗೆ ಅನಾಯಾಸವಾಗಿ 46 ಕೋಟಿ ರೂಪಾಯಿ ಲಾಭ ಮಾಡಿಕೊಟ್ಟಿರುವ ಆಪಾದನೆಗೆ ತಂಬುರಾಜ್ ಮತ್ತು ನಯ್ಯರ್ ಸಿಲುಕಿದ್ದಾರೆ. ಈ ಪ್ರಕರಣದಲ್ಲಿ ತಮ್ಮನ್ನು ವಿನಾಕಾರಣ ಸಿಲುಕಿಸಲಾಗಿದೆ ಎಂದು ತಂಬುರಾಜ್ ದೂರಿದ್ದಾರೆ.