ಆಲಮೇಲ: ಭೋವಿ ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಅಗತ್ಯವಿದೆ. ಸಮಾಜದ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಒಡೆಯರ ಹೇಳಿದರು.
ಆಲಮೇಲ ಗ್ರಾಮದಲ್ಲಿ ಭೋವಿ (ವಡ್ಡರ) ಸ್ವಾಭಿಮಾನಿ ಜಾಗೃತಿ ಸಭೆ ಉದ್ದೇಶಿಸಿ ಮಾತನಾಡಿದರು. ಭೋವಿ ಸಮಾಜ ಅಸಂಘಟಿತವಾಗಿದ್ದು, ನಾಯಕತ್ವದ ಸಮಸ್ಯೆ ಎದುರಿಸುತ್ತಿದೆ. ಸಮಾಜಕ್ಕೆ ಸರ್ಕಾರ ನೀಡಬೇಕಾದ ಯೋಜನೆಗಳ ಅನುಷ್ಠಾನದಲ್ಲಿ ಮೀನಮೇಷ ಎಣಿಸುತ್ತಿದೆ ಎಂದು ವಿಷಾದಿಸಿದರು.
ಸಭೆಯನ್ನು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ವೈ. ಕೊಟ್ರೇಶ್ ಉದ್ಘಾಟಿಸಿದರು. ಸರಕಾರ ಭೋವಿ ವಡ್ಡರ ಅಭಿವೃದ್ದಿ ನಿಗಮ ಸ್ಥಾಪಿಸುವದಾಗಿ ಘೋಷಣೆ ಮಾಡಿದ್ದರೂ ಇದುವರೆಗೂ ಸ್ಥಾಪನೆ ಮಾಡಿಲ್ಲ. ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಭರವಸೆ ನೀಡಿದಂತೆ ಸರ್ಕಾರ ವಡ್ಡರ ಅಭಿವೃದ್ಧಿ ನಿಗಮ ಸ್ಥಾಪಿಸಿ ಕಾರ್ಯ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿದರು.
ಅಧ್ಯಕ್ಷತೆಯನ್ನು ಸಮಾಜದ ಮುಖಂಡ ರಾಮಚಂದ್ರ ಯಂಪೂರೆ ವಹಿಸಿಕೊಂಡಿದ್ದರು. ಅರ್ಜುನ ವಡ್ಡರ, ಶಂಕರ ದೇವರಮನಿ ಉಪಸ್ಥಿತರಿದ್ದರು. ಶಂಕರ ದೇವರಮನಿ ಸ್ವಾಗತಿಸಿದರು. ರವಿ ರಾಯಚೂರ ವಂದಿಸಿದರು. ಪ್ರಕಾಶ ರಾಯಚೂರ ನಿರೂಪಿಸಿದರು.