ಶಿವಮೊಗ್ಗ: ಅಧಿಕಾರ ಹಿಡಿಯುವುದೇ ಮುಖ್ಯವಲ್ಲ, ಜನರ ಸಮಸ್ಯೆಗಳನ್ನು ಬಗೆಹರಿಸುವುದು ಮಖ್ಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂದಿರದ ನಿಜಲಿಂಗಪ್ಪ ಸಭಾಂಗಣದಲ್ಲಿ ಗಾಂಧಿ ಜಯಂತಿ ಅಂಗವಾಗಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ `ಕಾಂಗ್ರೆಸ್ ನೊಂದಿಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಯಾವುದೇ ಸರ್ಕಾರಗಳು ಇಷ್ಟೊಂದು ಭ್ರಷ್ಟಾಚಾರದಲ್ಲಿ ತೊಡಗಿರಲಿಲ್ಲ. ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಪಡಿತರ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಜೆಡಿಎಸ್ ಸರ್ಕಾರ ಅಧಿಕಾರಕ್ಕಾಗಿ ಯಾವುದೇ ಪಕ್ಷದೊಂದಿಗೆ ನಂಟು ಬೆಳೆಸಿಕೊಳ್ಳಲು ಹಾಗೂ ಅಧಿಕಾರಕ್ಕಾಗಿ ಯಾವುದೇ ವಾಮಮಾರ್ಗ ತುಳಿಯಲು ಸಿದ್ಧವಿದೆ.
ಅಧಿಕಾರದ ಆಸೆಗಾಗಿ ಸಮಾಜದಲ್ಲಿ ಜಾತೀಯತೆ ಸೃಷ್ಟಿಸಿ ವೋಟ್ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಅವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೇಲೆ ವಾಗ್ದಾಳಿ ಮಾಡಿದರು.
ಸಾಮಾಜಿಕ ನ್ಯಾಯ, ಜಾತ್ಯತೀತ ಸಮಾಜ ನಿರ್ಮಾಣ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಆದರಿಂದ ಕಾಂಗ್ರೆಸ್ಗೆ ಬನ್ನಿ ಎಂದು ಕರೆ ನೀಡಿದರು.
ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಮಾತನಾಡಿ, ಕಾಂಗ್ರೆಸ್ನ ಹಿರಿಯರು ಸ್ವಾತಂತ್ರ್ಯ ಹೋರಾಟ ಮಾಡಿ ಜೈಲು ಸೇರುತ್ತಿದ್ದರು. ಆದರೆ, ಬಿಜೆಪಿ ರಾಜಕಾರಣಿಗಳು ಹಣ ಲೂಟಿ ಮಾಡಿ ಜೈಲು ಸೇರುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಕೆಪಿಸಿಸಿ ಸದಸ್ಯ ಕರಿಯಣ್ಣ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮುಖಂಡರಾದ ಸೋಮಶೇಖರ್, ಎಸ್.ಕೆ. ಮರಿಯಪ್ಪ, ಎಚ್.ಸಿ. ಯೋಗೀಶ್, ಪಿ. ರುದ್ರೇಶ್, ಕೆ.ಬಿ. ಪ್ರಸನ್ನಕುಮಾರ್, ಕೆ. ರಂಗನಾಥ್ ಉಪಸ್ಥಿತರಿದ್ದರು.