ಕರ್ನಾಟಕದಲ್ಲಿ ಪುರಸಭೆ ಮತ್ತು ನಗರ ಸಭೆಗಳಿಗೆ ಚುನಾವಣೆಗಳು ನಡೆದು ಹೆಚ್ಚು ನೋಟು ಹಂಚಿದವರು ರಾಜಾರೋಷವಾಗಿ ಆಯ್ಕೆಯಾಗಿರುವುದನ್ನು ನಾವೆಲ್ಲಾ ಕಣ್ತುಂಬಿ ಕೊಂಡಿರುವುದು ಸರಿಯಷ್ಟೆ. ಪ್ರಜಾಪ್ರಭುತ್ವದ ಅಮೂಲ್ಯ ಮತಗಳು ಮತ ಒಂದಕ್ಕೆ ಸಾವಿರ ರೂಪಾಯಿಗಳಿಗೂ ಅಧಿಕ ಮೊತ್ತಕ್ಕೆ ಮಾರಾಟವಾದವು.
ಇತ್ತೀಚೆಗೆ ರಾಜಕಾರಣ ಎನ್ನುವುದು ಒಂದು ವೃತ್ತಿಯಾಗಿದೆ. ಇಂದಿನ ನಮ್ಮ ಎಲ್ಲಾ ರಾಜಕಾರಣಿಗಳು ವೃತ್ತಿನಿರತ ರಾಜಕಾರಣಿಗಳೇ. ರಾಜಕಾರಣ ಎನ್ನುವುದು ಒಂದು ವೃತ್ತಿಯಾಗದೆ ಪ್ರವೃತ್ತಿಯಾಗಬೇಕಿತ್ತು. ನಮ್ಮ ದೇಶದ ಪ್ರಾರಂಭಿಕ ಚುನಾವಣೆಗಳಲ್ಲಿ, ನಾಡಿನ ಮತದಾರ ಪ್ರಭುಗಳು ತಮ್ಮ ನಾಯಕರುಗಳಿಗೆ ಓಟಿನ ಜೊತೆಗೆ ನೋಟನ್ನೂ ಕೊಟ್ಟು ಸತ್ಕರಿಸುತ್ತಿದ್ದರು. ಇದಕ್ಕೆ ಶಾಂತವೇರಿ ಗೋಪಾಲಗೌಡರಂತಹ ನಾಯಕರುಗಳು ಎದುರಿಸಿದ ಚುನಾವಣೆಗಳೇ ಸಾಕ್ಷಿ.
ಪ್ರಜಾಪ್ರಭುತ್ವದ ನ್ಯೂನ್ಯತೆಗಳು, ತಮ್ಮ ಕರಾಳ ಬಾಹುಗಳನ್ನು ಚಾಚಿ ಓಟಿಗಾಗಿ ನೋಟಿನ ಕಂತೆಗಳನ್ನೇ ಧಾರಾಕಾರವಾಗಿ ಸುರಿಸುತ್ತಿವೆ.
ಸ್ವಯಂಘೋಷಿತ ಆಸ್ತಿ ವಿವರಗಳ ಪಟ್ಟಿಯನ್ನು ಗಮನಿಸಿದಾಗ ನಮ್ಮ ಕುಬೇರ ರಾಜಕಾರಣಿಗಳ ಆಸ್ತಿಯು ಪ್ರತಿ ಐದು ವರ್ಷಗಳಿಗೆ ಎರಡು - ಮೂರು ಪಟ್ಟು ದ್ವಿಗುಣಗೊಳ್ಳುತ್ತಿರುವುದು ನಿಜಕ್ಕೂ ಕಳವಳಕಾರಿಯಾದ ಸಂಗತಿಯೇ. ಈ ಚುನಾವಣೆಯಲ್ಲಿ ಗಮನಿಸಬೇಕಾದ ಮತ್ತೊಂದು ದುರದೃಷ್ಟಕರ ಸಂಗತಿಯೆಂದರೆ, ಎಲ್ಲಾ ಹಿರಿಯ ರಾಜಕಾರಣಿಗಳು ತಮ್ಮ ಪುತ್ರ - ರತ್ನಗಳನ್ನು (ಶನಿ ಸಂತಾನ) ಚುನಾವಣೆಗೆ ಎಳೆದು ತಂದಿರುವುದು.
-