‘ಲಂಚ ಪಡೆದಿದ್ದಕ್ಕಾಗಿ ಚೀನಾದಲ್ಲಿ ಚುನಾಯಿತ ಪ್ರತಿನಿಧಿಗೆ ಗಲ್ಲು’, ಇದು ಕಳೆದವಾರ ಭಾರತೀಯ ಪತ್ರಿಕೆಗಳಲ್ಲಿ ಬಂದ ಸಣ್ಣ ಸುದ್ದಿ. (ಪ್ರ.ವಾ. ಜ. 31) ಭ್ರಷ್ಟಾಚಾರ ನಡೆಸಿ ಕೇವಲ 23 ಮಂದಿಗೆ ಕಾನೂನುಬಾಹಿರವಾಗಿ ಸರ್ಕಾರದ ಹೊಸ ಗುತ್ತಿಗೆ, ಸಾಲ, ಹುದ್ದೆಗಳಲ್ಲಿ ಮುಂಬಡ್ತಿ ನೀಡಿ ಪಾಪ ಆ ಚೀನಿ ಆಳುವ ಪಕ್ಷದ ಪ್ರತಿನಿಧಿ ಕಮಾಯಿಸಿದ್ದು ಬರೀ ರೂ. 8 ಕೋಟಿ, ಆದರೆ ಈಗ ಕಳೆದುಕೊಳ್ಳಲಿರುವುದು ಪ್ರಾಣವನ್ನೇ.
ಆದರೆ ರೆಸಾರ್ಟ್ಗಳಲ್ಲಿ 40-50 ಕೋಟಿಗೆ ಹರಾಜಾಗುವ ಭಾರತದ ಚುನಾಯಿತ ಪ್ರತಿನಿಧಿಗಳಿಗೆ ಈ ಎಂಟು ಕೋಟಿಯೆಂದರೆ ಜುಜುಬಿ. ಇನ್ನು ನಮ್ಮ ಚುನಾಯಿತ ಪ್ರತಿನಿಧಿ ಭ್ರಷ್ಟಾಚಾರಕ್ಕಾಗಿ ಕೆಂಪು ಕೈಯಲ್ಲಿ ಸಿಕ್ಕಿಬಿದ್ದರೂ ಗಲ್ಲು ಬಿಡಿ ಸಾಧಾರಣ ಜೈಲು ಸಹಾ ಆಗುವುದಿಲ್ಲ. ಕಾರಣ ಶಬ್ಧದ ಜಾಲ ಹೆಣೆದು ಅವರನ್ನು ಸಮರ್ಥಿಸಲು, ಬಚಾವು ಮಾಡಲು ಪಕ್ಷದ ವರಿಷ್ಠರು, ಜಾತಿಯ ಮಠಾಧೀಶರು, ಸದಾಸಿದ್ಧ. ಅದಿರಲಿ, ಚೀನಾದಂತೆ ಭಾರತದಲ್ಲೂ ಭ್ರಷ್ಟ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಲಂಚಖೋರ ಅಧಿಕಾರಿಗಳಿಗೆ ಗಲ್ಲು ಆಗುವಂತಿದ್ದರೆ ಎಷ್ಟು ಚೆನ್ನಿತ್ತು ಅಲ್ಲವೇ!
ಗ್ರಾಮ ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ವರೆಗೆ, ಇರುವ ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಹಳ್ಳಿಯಿಂದ ರಾಜಧಾನಿಯವರೆಗೆ ಇರುವ ಮಹಾ ಭ್ರಷ್ಟ ಸರ್ಕಾರಿ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಲೆಕ್ಕ ಹಾಕಿದರೆ ಕನಿಷ್ಠ ಎರಡು ಲಕ್ಷ ಜನಪ್ರತಿನಿಧಿಗಳು ಹಾಗೂ ಇಪ್ಪತ್ತು ಲಕ್ಷ ಸರ್ಕಾರಿ ಮತ್ತು ಬ್ಯಾಂಕ್ ಅಧಿಕಾರಿಗಳಾದರೂ ತಮ್ಮ ನಿರ್ಲಜ್ಜ ಭ್ರಷ್ಟಾಚಾರಕ್ಕಾಗಿ ಭಾರತದಲ್ಲಿ ಗಲ್ಲು ಶಿಕ್ಷೆಗೆ ಅರ್ಹರಾಗುವುದು ಖಂಡಿತ!