ನವದೆಹಲಿ, (ಪಿಟಿಐ): ಕೇಂದ್ರ ಸಚಿವಾಲಯ ಮತ್ತು ಇಲಾಖೆಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ತಡೆಯಲು ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಕಣ್ಗಾವಲು ವ್ಯವಸ್ಥೆ ಬಲಪಡಿಸುವುದು ಸೇರಿದಂತೆ ವಿವಿಧ ಕ್ರಮಗಳ ಬಗ್ಗೆ ಸಚಿವರ ತಂಡ ಮಾಡಿದ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಅಧಿಕಾರಿಗಳ ವಿರುದ್ಧದ ಆರೋಪಗಳ ವಿಚಾರಣೆ ಮತ್ತು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರೀಯ ಜಾಗೃತ ಆಯೋಗದ ಸಲಹೆ ಪಡೆಯಲು ತಂಡ ಸಲಹೆ ಮಾಡಿದೆ. ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿಚಾರಣೆ ನಡೆಸಲು ಎಲ್ಲ ಇಲಾಖೆ ಮತ್ತು ಸಚಿವಾಲಯಗಳಲ್ಲಿ ನಿವೃತ್ತ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸುವಂತೆ ಸರ್ಕಾರ ಕೇಂದ್ರೀಯ ಜಾಗೃತ ಆಯೋಗಕ್ಕೆ ಸೂಚಿಸಿದೆ.
ಜಂಟಿ ಕಾರ್ಯದರ್ಶಿಗಳ ಮೇಲಿನ ದರ್ಜೆಯ ಅಧಿಕಾರಿಗಳ ವಿಚಾರಣೆಯ ಹಕ್ಕನ್ನು ಆಯಾಯ ಸಚಿವಾಲಯದ ಸಚಿವರಿಗೆ ನೀಡುವಂತೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ನೇತೃತ್ವದ ತಂಡ ಶಿಫಾರಸು ಮಾಡಿದೆ.