ಅಮೇಥಿ (ಪಿಟಿಐ): ಉತ್ತರ ಪ್ರದೇಶದ ಚುನಾವಣಾ ಪ್ರಚಾರಕ್ಕೆ ಇಳಿದಿರುವ ಪ್ರಿಯಾಂಕಾ ಗಾಂಧಿ, `ಭ್ರಷ್ಟಾಚಾರ, ಅರಾಜತೆ ಮತ್ತು ರಾಜಕೀಯ ಅವಕಾಶವಾದಗಳು ರಾಜ್ಯದ ಜನರ ಪ್ರಮುಖ ವೈರಿಗಳಾಗಿವೆ~ ಎಂದಿದ್ದಾರೆ.
ಐದು ದಿನಗಳ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ಪ್ರಿಯಾಂಕಾ, ಅಮೇಥಿ, ರಾಯ್ಬರೇಲಿಯ ತಲಾ ಐದು ಕ್ಷೇತ್ರಗಳಿಗೆ ಸೀಮಿತವಾಗಿ ಪ್ರಚಾರ ನಡೆಸುವುದಾಗಿ ಹೇಳಿದರು.
ಮುಲಾಯಂ ಸಿಂಗ್ ಯದವ್ ಮತ್ತು ಮಾಯಾವತಿ ಇಬ್ಬರಲ್ಲಿ ಕಾಂಗ್ರೆಸ್ಗೆ ಪ್ರಬಲ ವೈರಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಭ್ರಷ್ಟಾಚಾರ, ಅರಾಜಕತೆ ಮತ್ತು ಅವಕಾಶವಾದ ರಾಜಕಾರಣವೇ ರಾಜ್ಯದ ಜನರ ಪ್ರಮುಖ ವೈರಿಗಳು. ಆದರೆ ರಾಹುಲ್ ಇದಕ್ಕೆ ಹೊರತಾಗಿದ್ದು, ಇವುಗಳನ್ನು ಬದಲಾಯಿಸಲು ಕೆಲಸ ಮಾಡುತ್ತಿದ್ದಾರೆ~ ಎಂದು ನುಡಿದರು.
`ಈ ಚುನಾವಣೆಯಲ್ಲಿ ಈ ರೀತಿಯ ರಾಜಕಾರಣ ಕೆಲಸ ಮಾಡುವುದಿಲ್ಲ. ಜನರು ಬದಲಾವಣೆ ಬಯಸಿದ್ದು, ಮತದಾರರಿಂದ ಇದು ಸಾಧ್ಯವಾಗಲಿದೆ~ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಪ್ರಭಾವ ಚುನಾವಣೆ ಮೇಲೆ ಬೀರುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಇದನ್ನು ಜನರಿಗೇ ಕೇಳಿ, ಅವರೇ ಉತ್ತರಿಸುತ್ತಾರೆ~ ಎಂದರು.
ಇಂದು ಮರು ಮತದಾನ
ಇಂಫಾಲ(ಐಎಎನ್ಎಸ್): ಮಣಿಪುರದ ಐದು ಗುಡ್ಡಗಾಡು ಜಿಲ್ಲೆಗಳಲ್ಲಿ ಶನಿವಾರ ಘೋಷಿಸಲಾಗಿರುವ ಮರುಮತದಾನವನ್ನು ಶಾಂತಿಯುತವಾಗಿ ನಡೆಸಲು ಹೆಚ್ಚುವರಿ ರಕ್ಷಣಾ ಸಿಬ್ಬಂದಿಯನ್ನು ಚುನಾವಣಾ ಆಯೋಗ ನಿಯೋಜಿಸಿದೆ.
ಉಖ್ರುಲ್, ತೆಮೆಂಗ್ಲಾಂಗ್, ಸೇನಾಪತಿ, ಚಂದೇಲ್ ಹಾಗೂ ಚುರಾಚಾಂದ್ಪುರಗಳ ಒಟ್ಟೂ 34 ಚುನಾವಣಾ ಮತಗಟ್ಟೆಗಳಲ್ಲಿ ಮರುಮತದಾನ ನಡೆಯಲಿದೆ.