ಹೆಬ್ರಿ: `ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂಬರ್ 1 ಸ್ಥಾನ ಪಡೆದು, ಜನ ತಲೆ ತಗ್ಗಿಸುವ ಕೆಲಸ ಮಾಡಿದೆ~ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಸೊರಕೆ ಹೇಳಿದರು.
ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ವಠಾರದಲ್ಲಿ ಭಾನುವಾರ ಸಂಜೆ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಮಿತಿ ಪದಗ್ರಹಣ ಮತ್ತು ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ರೈತರು ಮತ್ತು ಯುವಕರಿಗೆ ಕಾಂಗ್ರೆಸ್ ಪಕ್ಷ ನಿರಂತರವಾಗಿ ವಿಶೇಷ ಕಾರ್ಯಕ್ರಮಗಳನ್ನು ನೀಡಿದೆ. ಕಾಂಗ್ರೆಸ್ ಜನರೊಂದಿಗೆ ಬೆರೆಯುವ ಮತ್ತು ರಾಷ್ಟ್ರದ ಭವಿಷ್ಯ ನಿರ್ಮಾಣ ಮಾಡುವ ಪಕ್ಷ~ ಎಂದರು.
ಚುನಾವಣಾ ದಿಕ್ಸೂಚಿ: ಪೆರ್ಡೂರಿನ ದೇವರ ಸನ್ನಿಧಿಯ ಪಕ್ಕ ನಡೆದ ಈ ಬೃಹತ್ ಸಭೆ ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ಮಾಚಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಪೆರ್ಡೂರು ಬಸ್ ನಿಲ್ದಾಣಕ್ಕೆ ಸಂಸದ ಆಸ್ಕರ್ ಫರ್ನಾಂಡಿಸ್ ಅವರ ರಾಜ್ಯಸಭಾ ಸದಸ್ಯರ ನಿಧಿಯಿಂದ ಕಾಂಕ್ರೀಟ್ ಕಾಮಗಾರಿ ನಡೆಸುವುದಾಗಿ ಪ್ರಕಟಿಸಿದ ಹೆಗ್ಡೆ, ನಮ್ಮಿಂದ ದೂರವಾದ ಕೆಲವರು `ಹೆಗ್ಡೆ ಪೆರ್ಡೂರಿಗೆ ಏನೂ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಹಿರಂಗ ಚರ್ಚೆಗೆ ನಾನು ಸಿದ್ಧವಿದ್ದೇನೆ. ಬಿಜೆಪಿ ನಾಯಕರು ಬರಲಿ~ ಎಂದು ಸವಾಲು ಹಾಕಿದರು.
ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಭೂಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜಯಪ್ರಕಾಶ ಹೆಗ್ಡೆ ದೂರಿದರು.
ಶಾಸಕ ಗೊಪಾಲ ಭಂಡಾರಿ ಅವರೂ ಮಾತನಾಡಿದರು.ಹಿರಿಯ ಕಾಂಗ್ರೆಸ್ ಸದಸ್ಯರನ್ನು ಸನ್ಮಾನಿಸಲಾಯಿತು.
ಹಲವು ಯುವಕರು ಪಕ್ಷಕ್ಕೆ ಸೇರಿದರು. ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ, ಪಕ್ಷದ ಮುಖಂಡರಾದ ವಸಂತ ವಿ.ಸಾಲ್ಯಾನ್, ಪ್ರಮೋದ್ ಮಧ್ವರಾಜ್, ಎಂ.ಎ.ಗಫೂರ್, ಜಿ.ಪಂ. ಸದಸ್ಯೆ ಗೋಪಿ ನಾಯ್ಕ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೊ, ಶಾಂತಾರಾಮ್ ಸೂಡ, ಅಶೋಕ್ ಕುಮಾರ್ ಕೆ, ನರೇಶ್ ಕಾಮತ್, ಮುರಳಿ ಶೆಟ್ಟಿ, ಭಿರ್ತಿ ರಾಜೇಶ್ ಶೆಟ್ಟಿ, ಇಂದಿರಾ ವಿ ಆಚಾರ್ಯ ಮೊದಲಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.