ಶಹಾಪುರ: ಅಣ್ಣಾ ಹಜಾರೆಯವರು ನಡೆಸುತ್ತಿರುವ ಹೋರಾಟಕ್ಕೆ ನೈತಿಕ ಬೆಂಬಲ ಮತ್ತು ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತು ಹಾಕಬೇಕೆಂದು ಆಗ್ರಹಿಸಿ ಪಟ್ಟಣದ ನಾಗರಿಕ ಹಿತ ರಕ್ಷಣಾ ಸಮಿತಿ ಸದಸ್ಯರು ಗುರುವಾರ ಕರೆ ನೀಡಿದ್ದ ~ಶಹಾಪುರ ಬಂದ್~ ಯಶಸ್ವಿಯಾಯಿತು.
ವಕೀಲರು, ವೈದ್ಯರು ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ವ್ಯಾಪಾರಿಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನತೆ ಸಹಕರಿಸಿ ಬೀದಿಗಿಳಿದು ಹೋರಾಟ ನಡೆಸಿದ್ದರಿಂದ ಬಂದ್ ಯಶಸ್ವಿಯಾಯಿತು.
ಶಹಾಪುರ ಬಂದ್ ಕರೆಗೆ ಜನತೆ ಅತ್ಯುತ್ಸಾಹದಿಂದ ಸ್ಪಂದಿಸಿದರು. ಬೆಳಿಗ್ಗೆ ಸ್ವಇಚ್ಛೆಯಿಂದ ಪಕ್ಷಭೇದ ಹಾಗೂ ವಯಸ್ಸಿನ ತಾರತಮ್ಯವನ್ನು ಬದಿಗೊತ್ತಿ ಎಲ್ಲರೂ ಬಂದ್ನಲ್ಲಿ ಪಾಲ್ಗೊಂಡರು. ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಗುರಿ ಎನ್ನುವಂತೆ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು.
ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದೆಂದು ಮುಕ್ತ ರಸ್ತೆ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಮತ್ತೆ ಮಧ್ಯಾಹ್ನದ ನಂತರ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದವು.
ವಿವಿಧ ಕಾಲೇಜಿನ ವಿದ್ಯಾರ್ಥಿಗಳು ತಂಡೋಪತಂಡವಾಗಿ ಪಟ್ಟಣದ ಚರಬಸವೇಶ್ವರ ಕಮಾನ ಬಳಿ ಆಗಮಿಸಿದರು. ಭ್ರಷ್ಟಾಚಾರ ತೊಲಗಲಿ ದೇಶ ಉಳಿಯಲಿ ಎಂಬ ಘೋಷಣೆಗಳನ್ನು ಕೂಗುತ್ತಾ, ರಾಷ್ಟ್ರಧ್ವಜವನ್ನು ಹಿಡಿದುಕೊಂಡು ವಿದ್ಯಾರ್ಥಿನಿಯರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.