ಚಿಕ್ಕಮಗಳೂರು: ರಾಜ್ಯ ಸರ್ಕಾರ ಬಲು ಭ್ರಷ್ಟವಾಗಿದೆ ಎಂದು ಖಂಡಿಸಿರುವ ಜೆಡಿಎಸ್ ಜಿಲ್ಲಾ ಘಟಕ, ಬುಧವಾರ ನಗರದಲ್ಲಿ ಅಣಕು ಶವಯಾತ್ರೆ ನಡೆಸಿ ಆಜಾದ್ ಮೈದಾನ ವೃತ್ತದಲ್ಲಿ ಸರ್ಕಾರದ ಪ್ರತಿಕೃತಿ ದಹಿಸಿತು.
ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎಚ್.ದೇವರಾಜ್, ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ರಾಜ್ಯ ಸಮಿತಿ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಲ್ಲಿ ನಿರತವಾಗಿರುವ ಬಿಜೆಪಿ ಸರ್ಕಾರವನ್ನು ರಾಜ್ಯದ ಜನತೆ ತೊಲಗಿಸಬೇಕೆಂದು ಮನವಿ ಮಾಡಿದರು.
ರಸಗೊಬ್ಬರ ಕೇಳಿದ ಹಾವೇರಿ ರೈತರ ಮೇಲೆ ಗುಂಡು ಹಾರಿಸಲಾಯಿತು. ರೈತರ ಆತ್ಮಹತ್ಯೆ ತಡೆಯುವಲ್ಲಿ ವಿಫಲವಾಗಿದ್ದರೂ ರೈತರ ಸರ್ಕಾರ ಎಂದು ಹೇಳಿ ಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಟೀಕಿಸಿದರು.
ಇದಕ್ಕೂ ಮುನ್ನ ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಸುಬ್ರಾಯ ಕಾಮತ್ ಅವರಿಗೆ ಮನವಿ ಸಲ್ಲಿಸಿದರು.
ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಉಮಾ, ಐ.ಬಿ.ಶಂಕರ್, ಮುಖಂಡರಾದ ಹೊಲದಗದ್ದೆ ಗಿರೀಶ್, ಹಂಪಯ್ಯ, ಅನಿಲ್ ಕುಮಾರ್, ರಮೇಶ್, ಕೋಟೆ ಹರೀಶ್, ಜಯರಾಜ್, ಐ.ಡಿ.ಚಂದ್ರಶೇಖರ್ ಪ್ರತಿಭಟನೆಯಲ್ಲಿದ್ದರು.