ಮಂಗಳೂರು: ಭ್ರಷ್ಟಾಚಾರ ಆರೋಪ ಎಲ್ಲಾ ಪಕ್ಷಗಳ ನಾಯಕರ ಮೇಲೂ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧವೂ ಭ್ರಷ್ಟಾಚಾರ ಆರೋಪ ಇದೆ. ಒಂದು ವೇಳೆ ಅವರು ತಪ್ಪು ಮಾಡಿದ್ದರೆ ಅದಕ್ಕೆ ಅವರೇ ಹೊಣೆಗಾರರು ಹೊರತು ಪಕ್ಷ ಹೊಣೆ ಅಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
`ಆರೋಪ ಕೇಳಿಬಂದ ತಕ್ಷಣ ಅವರು ತಪ್ಪು ಮಾಡಿದ್ದಾರೆ ಎಂದಲ್ಲ. ಆರೋಪಿತರು ನಾಯಕರು ಬೇಗ ಆರೋಪ ಮುಕ್ತರಾಗಿ ಹೊರಬರಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ಆದರೆ, ವ್ಯಕ್ತಿಯೊಬ್ಬ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅದರಿಂದ ಪಕ್ಷಕ್ಕೆ ಕಳಂಕ ಉಂಟಾಗಲು ಸಾಧ್ಯವಿಲ್ಲ, ಅದು ಆತ ಮಾಡಿದ ತಪ್ಪು, ಅದಕ್ಕೆ ಆತನೇ ಹೊಣೆಗಾರನಾಗುತ್ತಾನೆ~ ಎಂದರು. ಸೋಮವಾರ ಇಲ್ಲಿ ಬಿಜೆಪಿ ಯುವ ಮೋರ್ಚಾದ ಜನಜಾಗೃತಿ ಸಮಾವೇಶಕ್ಕೆ ಪೂರ್ವಭಾವಿಯಾಗಿ `ಪ್ರದರ್ಶನಿ~ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಿಸಲಾಗುವುದು ಎಂದ ಅವರು, ಯಡಿಯೂರಪ್ಪ ಅವರ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು.