ಬೆಂಗಳೂರು: `ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ ಸಮಾಜ ಕಂಡೂ ಕಾಣದಂತಿದೆ~ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.
ನಗರದಲ್ಲಿ ಮಠವು ಹಮ್ಮಿಕೊಂಡಿರುವ ಶರನ್ನವರಾತ್ರಿ ದಸರಾ ಮಹೋತ್ಸವ ಮತ್ತು ಧರ್ಮ ಜನಜಾಗೃತಿ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಹೆಣ್ಣಿನಿಂದಲೇ ಹೆಣ್ಣಿನ ದೌರ್ಜನ್ಯ ನಡೆಯುತ್ತಿದೆ ಎಂಬ ಆತಂಕ ಕಾಡುತ್ತಿದೆ. ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಭ್ರೂಣ ಹೆಣ್ಣು ಎಂದು ತಿಳಿದ ತಕ್ಷಣ ಅದನ್ನು ನಾಶಗೊಳಿಸುವ ಮಹಿಳೆಯರೂ ಇದ್ದಾರೆ ಎಂದು ಅಭಿಪ್ರಾಯಪಟ್ಟರು.
ಗಂಡಿರಲಿ ಹೆಣ್ಣಿರಲಿ ಅದೊಂದು ಜೀವ ಎಂಬುದನ್ನು ಅರಿಯಬೇಕಾಗಿದೆ. ಉತ್ತಮ ಸಂಪ್ರದಾಯ ಮತ್ತು ಪರಂಪರೆಗಳು ಮಹಿಳೆಯರಿಂದಲೇ ಮುನ್ನಡೆದುಕೊಂಡು ಬಂದಿವೆ. ಮಾತೃ ದೇವೋ ಭವ (ತಾಯಿಯೇ ದೇವರು) ಎಂದು ಶಾಸ್ತ್ರವು ಸಾರಿ ಹೇಳಿದೆ. ಇಂದು ಮಹಿಳೆ ಎಲ್ಲ ರಂಗಗಳಲ್ಲಿ ಪುರುಷನಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ ಎಂಬುದನ್ನೂ ತೋರಿಸಿಕೊಟ್ಟಿದ್ದಾಳೆ ಎಂದರು.
`ಬಾಳಿಗೆ ಬೆಳಕು~ ಕೃತಿಯನ್ನು ಬಿಡುಗಡೆ ಮಾಡಿದ ಸಚಿವ ಸಿ.ಎಂ.ಉದಾಸಿ ಮಾತನಾಡಿ, ರಾಜಕೀಯದಲ್ಲಿ ಇರುವವರಿಗೆ ನಾಲಿಗೆಯ ಮೇಲೆ ಹಿಡಿತ ಇರಬೇಕು. ಸೌಜನ್ಯದ ನುಡಿ ನುಡಿಯಬೇಕು ಎಂದರು.
ಸಚಿವರಾದ ಎಸ್.ಎ.ರವೀಂದ್ರನಾಥ್, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಸಂಸದ ಶಿವಕುಮಾರ ಉದಾಸಿ ಭಾಗವಹಿಸಿದ್ದರು.
ಸನ್ಮಾನ: ಚಿತ್ರ ಸಾಹಿತಿ ಸಿ.ವಿ.ಶಿವಶಂಕರ್ ಹಾಗೂ ಉದ್ಯಮಿ ನಾಗಸುಂದರ್ ಅವರನ್ನು ಸನ್ಮಾನಿಸಲಾಯಿತು. ಕುಪ್ಪೂರಿನ ಡಾ.ಯತೀಶ್ವರ ಶಿವಾಚಾರ್ಯರು `ಪಂಚಪೀಠಗಳ ಪರಂಪರೆ~ ಕುರಿತು ಉಪನ್ಯಾಸ ನೀಡಿದರು.