ರಿಪ್ಪನ್ಪೇಟೆ: ಮಂಗನ ಕಾಯಿಲೆ ಬಗ್ಗೆ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಈ ಬಗ್ಗೆ ಮುಂಜಾಗರೂಕತೆ ವಹಿಸುವ ಅಗತ್ಯವಿದೆ ಎಂದು ಸ್ಥಳೀಯ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ವಿಜಯ್ಕುಮಾರ್ ತಿಳಿಸಿದರು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಬೆಳ್ಳೂರು ಗ್ರಾಮದ ಮಸ್ಕಾನಿಯಲ್ಲಿ ಶನಿವಾರ ಮತ್ತೊಂದು ಮಂಗ ಸಾವು ಕಂಡಿದ್ದು ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಅಧಿಕಾರಿ ಡಾ.ರುದ್ರಪ್ಪ, ಸಹಾಯಕ ಅಧಿಕಾರಿ ಚಂದ್ರೇಗೌಡ, ಕೆಎಫ್ಡಿ ಅಧಿಕಾರಿ ವೀರಭದ್ರಪ್ಪ, ಶ್ರೀಕಾಂತ್ ಪಾಟೀಲ್, ಟಿಎಚ್ಒ ನಾಗರಾಜ್, ವೈದ್ಯಾಧಿಕಾರಿ ವಿಜಯಕುಮಾರ್ ಹಾಗೂ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಂಗನ ಶವ ಪರೀಕ್ಷೆ ನಡೆಸಿದರು.
ಈವರೆಗೆ ಕಾಯಿಲೆ ಕುರಿತು ಯಾವುದೇ ಅಧಿಕೃತ ಪ್ರಕರಣ ದಾಖಲಾಗಿಲ್ಲ. ಈ ಹಿಂದೆಯೂ ಸತ್ತ ಮಂಗಗಳ ಮರಣೋತ್ತರ ವರದಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಫಲಿತಾಂಶ ಬಂದ ನಂತರ ಕಾಯಿಲೆ ಬಗ್ಗೆ ನಿಖರವಾದ ಮಾಹಿತಿ ನೀಡಬಹುದು ಎಂದು ಡಾ.ವಿಜಯಕುಮಾರ್ ತಿಳಿಸಿದರು.
ಈಗಾಗಲೇ ಮುಂಜಾಗ್ರತೆ ಕ್ರಮ ಕೈಗೊಂಡಿದ್ದು ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ, ಜ್ವರ ಕಾಣಿಸಿಕೊಂಡರೆ ತಕ್ಷಣವೇ ಸ್ಥಳೀಯ ಸರ್ಕಾರಿ ಅಸ್ಪತ್ರೆಗೆ ಬಂದು ವೈದ್ಯರಿಂದ ಉಚಿತ ಚಿಕಿತ್ಸೆ ಹಾಗೂ ಸಲಹೆ ಪಡೆಯುವಂತೆ ಕೋರಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಜಪ್ಪ, ಬಿ.ಜಿ. ಶೇಷಪ್ಪ, ರಾಘವೇಂದ್ರ, ದಿನೇಶ್, ಉಪೇಂದ್ರ, ಕಿರಣ, ದೇವಪ್ಪ ರವಿ ಹಾಜರಿದ್ದರು.