ಮಂಗಳೂರು: ನಗರದ ಮಂಗಳ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಈ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ 3 ಕೋಟಿ 9 ಲಕ್ಷ ಹಣ ಬಿಡುಗಡೆಯಾಗಿದ್ದು, 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ನವದೆಹಲಿಯ ಸಿನ್ಕಾಟ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಟೆಂಡರ್ ಪಡೆದಿದೆ. 8 ಲೇನ್ಗಳ 400 ಮೀಟರ್ ಟ್ರ್ಯಾಕ್ ನಿರ್ಮಾಣವಾಗಲಿದ್ದು, ಜರ್ಮನಿ ತಜ್ಞರ ಉಸ್ತುವಾರಿಯಲ್ಲಿ `ಸಿಂಥೆಟಿಕ್~ ಕೆಲಸ ನಡೆಯಲಿದೆ.
`ಬಹುವರ್ಷದ ಬೇಡಿಕೆ ಈಗ ಸಾಕಾರಗೊಳ್ಳುತ್ತಿದೆ. ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಲಿ~ ಎಂದು ಭಟ್ ಹಾರೈಸಿದರು. ಟೆಂಡರ್ನಲ್ಲಿ ಒಂದು `ಡಿ~ಗೆ ಅವಕಾಶ ಮಾಡಿಕೊಡಲಾಗಿದೆ. ಟ್ರ್ಯಾಕ್ನ ಎರಡೂ ಒಳಮೂಲೆಗಳಲ್ಲಿ ಜಂಪ್ಸ್ ಮತ್ತು ಥ್ರೋ ಅಭ್ಯಾಸಕ್ಕಾಗಿ ಸಿಂಥೆಟಿಕ್ `ಡಿ~ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಶಾಸಕ ಯು.ಟಿ.ಖಾದರ್, ಜಿಲ್ಲಾಧಿಕಾರಿ ಚನ್ನಪ್ಪ ಗೌಡ, ಪಾಲಿಕೆ ಆಯುಕ್ತ ಹರೀಶ್ ಕುಮಾರ್, ಸಿಂಡಿಕೇಟ್ ಸದಸ್ಯ ತೇಜೋಮಯ, ಯುವಜನ ಸೇವಾ-ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪಾರ್ಶ್ವನಾಥ್, ದ.ಕ. ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಅರುಣ್ ಕುಮಾರ್, ಉಪಾಧ್ಯಕ್ಷ ತಾರನಾಥ್ ಇತರರಿದ್ದರು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2010ರ ಆಗಸ್ಟ್ನಲ್ಲಿ ಟ್ರ್ಯಾಕ್ಗಾಗಿ ಅಡಿಗಲ್ಲು ಹಾಕಿದ್ದರು.
ನಿರ್ಬಂಧ: ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಶುಕ್ರವಾರದಿಂದಲೇ ಕ್ರೀಡಾಂಗಣ ಪ್ರವೇಶ ನಿಷೇಧಿಸಲಾಗಿದೆ. ನಿತ್ಯ ಬೆಳಿಗ್ಗೆ-ಸಂಜೆ ವಾಯು ವಿಹಾರಕ್ಕೆ ಹೋಗುವವರು ಇದೇ ಕ್ರೀಡಾಂಗಣ ಆಶ್ರಯಿಸಿದ್ದರು.
ಜನರಿಗೆ ಅಡ್ಡಾಡಲು ಅನುಕೂಲ ಆಗುವಂತೆ ಕ್ರೀಡಾಂಗಣದ ಹೊರಭಾಗದಲ್ಲಿ ಗ್ಯಾಲರಿಯ ಹೊರಬದಿ `ವಾಯು ವಿಹಾರ ಪಥ~ ನಿರ್ಮಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಭರವಸೆ ನೀಡಿದ್ದಾರೆ.