ಬೆಂಗಳೂರು (ಪಿಟಿಐ): ಮುಂಬರುವ ದಿನಗಳಲ್ಲಿ ರೂ.450 ಕೋಟಿ ವೆಚ್ಚದಲ್ಲಿ ಮಂಗಳ ಗ್ರಹದ ಅಧ್ಯಯನಕ್ಕೆ `ದೇಶಿ' ಉಪಗ್ರಹ ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಯೋಜನೆಯು `ಪ್ರಚಾರ ತಂತ್ರ'ವಾಗಿದೆ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಆರೋಪಿಸಿದರು.
'ಅತ್ಯುತ್ತಮವಾದ ಈ ಯೋಜನೆಯನ್ನು ಇಸ್ರೊ ಪ್ರಚಾರ ತಂತ್ರವನ್ನಾಗಿ ಬಳಸಿಕೊಂಡಿದೆ' ಎಂದು ನಾಯರ್ ಟೀಕಿಸಿದರು.
ಸದ್ಯ ದೇಶ ತೀವ್ರ ತರದ ಸಂವಹನ ವಾಹಕಗಳ ಕೊರತೆ ಎದುರಿಸುತ್ತಿದೆ. ಈ ಸಮಸ್ಯೆಯನ್ನು ಕೆ.ಕಸ್ತೂರಿ ರಂಗನ್ ಸಮೀತಿಯ ಶಿಫಾರಸುಗಳನ್ನು ಅನುಸರಿಸುವ ಮೂಲಕ ಇಸ್ರೊ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
`ಒಂದು ವೇಳೆ ಉಡಾವಣೆ ನಡೆದರೆ ಅದು ಮತ್ತೊಂದು ಪಿಎಸ್ಎಲ್ವಿ ಉಡಾವಣೆ ಮಾತ್ರವಷ್ಟೇ. ಒಂದು ಉಡಾವಣೆ ಚಂದ್ರನಿಗೆ ತಲುಪಿದ ನಂತರ ಮತ್ತೊಂದು ಉಡಾವಣೆಗೆ ಸುಮಾರು ಎಂಟು ತಿಂಗಳು ಕಾಯಬೇಕು. ಈ ವಿಷಯ ಕುರಿತಂತೆ ವೈಜ್ಞಾನಿಕ ಸಮುದಾಯದಿಂದ ಗಂಭೀರ ವಿಮರ್ಶೆ ನಡೆಯುವ ಅಗತ್ಯವಿದೆ' ಎಂದು ಅವರು ತಿಳಿಸಿದರು.
`ಮಂಗಳ ಗ್ರಹದ ಸಮಗ್ರ ಅಧ್ಯಯನಕ್ಕೆ ಅಕ್ಟೋಬರ್ ಕೊನೆಯ ವಾರದಲ್ಲಿ ಗಗನ ನೌಕೆ ಕಳುಹಿಸಲಾಗುವುದು' ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಅವರು ಇತ್ತೀಚಿಗಷ್ಟೇ ಪ್ರಕಟಿಸಿದರು.