ಬೆಂಗಳೂರು: `ಮಂಗಳ ಗ್ರಹದ ಸಮಗ್ರ ಅಧ್ಯಯನಕ್ಕೆ ಅಕ್ಟೋಬರ್ ಕೊನೆಯ ವಾರದಲ್ಲಿ ಗಗನ ನೌಕೆ ಕಳುಹಿಸಲಾಗುವುದು' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಪ್ರಕಟಿಸಿದರು.
ನಗರದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ `ನಮ್ಮ ಸೌರವ್ಯೆಹ' ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
`ಗಗನನೌಕೆಯನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಂಗಳನ ಅಂಗಳದಲ್ಲಿ ಮಿಥೆನ್ ರೂಪುಗೊಂಡ ಬಗೆಗೆ ನೌಕೆ ವಿಶೇಷ ಅಧ್ಯಯನ ನಡೆಸಲಿದೆ' ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಪ್ರೊ. ಯು.ಆರ್. ರಾವ್, `ನೂರಾರು ವರ್ಷಗಳಿಂದ ಸಂಶೋಧನೆಗಳು ನಡೆದಿದ್ದರೂ ಭೂಮಿಯ ಕುರಿತು ನಾವು ತಿಳಿದುಕೊಂಡಿದ್ದು ಅತ್ಯಲ್ಪವಾದುದು' ಎಂದು ಹೇಳಿದರು.
`ಭೂಮಿಯಲ್ಲಿ ನೀರಿನ ಲಭ್ಯತೆ ಇದೆ. ಆಮ್ಲಜನಕ ಹೇರಳವಾಗಿದೆ. ಆದರೆ, ಪಕ್ಕದ ಗ್ರಹಗಳಾದ ಮಂಗಳ, ಶುಕ್ರನಲ್ಲಿ ಏಕಿಲ್ಲ, ಸೌರ ಮಂಡಲ ಅಷ್ಟೊಂದು ಬಿಸಿಯಾಗಿರುವುದು ಏಕೆ ಎಂಬಂತಹ ಸಾವಿರಾರು ಪ್ರಶ್ನೆಗಳಿಗೆ ನಮಗೆ ಉತ್ತರ ಕಂಡುಕೊಳ್ಳಲು ಆಗಿಲ್ಲ' ಎಂದರು.
`ನಮ್ಮದು ಮುಂದುವರಿದ ನಾಗರಿಕತೆ ಎಂದು ಹೇಳಲಾಗುತ್ತಿದೆ. ವಿಜ್ಞಾನದ ವಿಷಯ ಬಂದಾಗ ನಾವಿನ್ನೂ ನಾಗರಿಕತೆ ಮೊದಲ ಮೆಟ್ಟಿಲಲ್ಲಿದ್ದೇವೆ ಎನಿಸುತ್ತದೆ. ತಿಳಿದಿರುವುದು ಅಲ್ಪವಾಗಿದ್ದು, ತಿಳಿಯಲಾರದ್ದು ಬ್ರಹ್ಮಾಂಡದಷ್ಟಿದೆ' ಎಂದು ಹೇಳಿದರು.