ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನೆಡೆಗೆ ಭಾರತೀಯರ ನಡಿಗೆಗೆ ಇಸ್ರೊ ಸಜ್ಜು

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:ಮಂಗಳನೆಡೆಗೆ ಭಾರತೀ­ಯರ ನಡಿಗೆಯ ಕನಸನ್ನು ನನಸಾ­ಗಿಸುವ ಉಪಗ್ರಹವನ್ನು ಶ್ರೀಹರಿಕೋಟಾ­ದಲ್ಲಿರುವ ಉಡಾವಣಾ ಕೇಂದ್ರಕ್ಕೆ ಇದೇ 27ರಂದು ಕೊಂಡೊಯ್ಯಲು ಭಾರ­ತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಧರಿಸಿದೆ.
ಈ ಉಪಗ್ರಹವನ್ನು ಇನ್ನು ಎರಡು ತಿಂಗಳಲ್ಲಿ ಮಂಗಳನತ್ತ ಚಿಮ್ಮಿಸುವ ಆಲೋಚನೆಯನ್ನು ‘ಇಸ್ರೊ’ ಹೊಂದಿದೆ.

ಈ ಉಪಗ್ರಹವನ್ನು    ಪಿಎಸ್‌­ಎಲ್‌ವಿ –ಸಿ 25 ಉಡಾವಣಾ ವಾಹ­ನದ ಮೂಲಕ ಮಂಗಳ ಗ್ರಹಕ್ಕೆ ಕಳುಹಿ­ಸಲಾಗುತ್ತದೆ. ಅಕ್ಟೋಬರ್‌ 21ರಿಂದ ನವೆಂಬರ್‌ 19ರ ನಡುವಣ ಅವಧಿಯಲ್ಲಿ ಈ ಮಹತ್ವದ ಹೆಜ್ಜೆ ಇಡಲು ‘ಇಸ’್ರೊ ಸಿದ್ಧತೆ ನಡೆಸಿದೆ. ಸೌರಮಂಡಲದ ಇನ್ನೊಂದು ಗ್ರಹದತ್ತ ಭಾರತ ಕೈಗೊಳ್ಳಲಿರುವ ಪ್ರಥಮ ಯಾನ ಇದಾಗಿದೆ. ಭೂಮಿಯಿಂದ ಮಂಗಳ ಗ್ರಹ ತಲುಪಲು ಉಪಗ್ರಹಕ್ಕೆ ಒಂಬತ್ತು ತಿಂಗಳ ಕಾಲಾವಕಾಶ ಬೇಕು.

ಈ ಯೋಜನೆಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಒಪ್ಪಿಗೆ ದೊರೆತಿತ್ತು. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಗುರಿ ಸಾಕಾರಗೊಳ್ಳುವ ನಿಟ್ಟಿನಲ್ಲಿ ಈ ಯೋಜನೆ ಅತ್ಯಂತ ಮಹತ್ವದ್ದು ಎಂದು ಬುಧವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಇಸ್ರೊ ವಿಜ್ಞಾನಿಗಳು ಬಣ್ಣಿಸಿದರು.

‘ಇಂಥ ಯಾನವನ್ನು ಭಾರತ ಇದುವರೆಗೆ ಕೈಗೊಂಡಿಲ್ಲ. ಮಂಗಳ ಗ್ರಹಕ್ಕೆ ಹೋಗಿ, ಅಲ್ಲಿಂದ ಇಲ್ಲಿಗೆ ಮಾಹಿತಿ ರವಾನಿಸುವುದು ಮಹತ್ತರ ಕಾರ್ಯ. ಮುಂದಿನ ದಿನಗಳಲ್ಲಿ ದೇಶ  ಮಂಗಳನತ್ತ ಕೈಗೊಳ್ಳಲಿರುವ ಅನೇಕ ಯೋಜನೆಗಳಿಗೆ ಇದು ಆರಂಭಿಕ ಬಿಂದು’ ಎಂದು  ಸುದ್ದಿಗಾರರ ಜೊತೆ ಮಾತನಾಡಿದ ಇಲ್ಲಿನ ಉಪಗ್ರಹ ನಿಯಂತ್ರಣ ಕೇಂದ್ರದ ನಿರ್ದೇಶಕ ಎಸ್‌.ಕೆ. ಶಿವಕುಮಾರ್‌ ತಿಳಿಸಿದರು.

‘ಮಂಗಳ ಗ್ರಹದಲ್ಲಿ ಮಿಥೇನ್‌ ಅನಿಲ ಇದೆಯೇ ಎಂಬುದನ್ನು ಪತ್ತೆ ಮಾಡು­ವತ್ತ ನಾವು ಗಮನಹರಿ­ಸಲಿದ್ದೇವೆ. ಅಲ್ಲಿ ಜೀವ ಸಂಕುಲ ಇದೆಯೇ ಅಥವಾ ಹಿಂದೆ ಇತ್ತೇ ಎಂಬ ಬಗ್ಗೆ ಇದು ಸುಳಿವು ನೀಡಲಿದೆ’ ಎಂದು ಯೋಜನೆಯ ನಿರ್ದೇ­ಶಕ ಎಸ್‌. ಅರುಣನ್‌ ಹೇಳಿದರು.
ಉಡಾವಣೆ ಮೊದಲು ಸೂಕ್ತ ಪರೀಕ್ಷೆ ನಡೆಸದ ಕಾರಣ, ಜಗತ್ತಿನ ಬೇರೆ ಬೇರೆ ದೇಶಗಳು ನಡೆಸಿದ ಮಂಗಳ ಯಾನ ವಿಫಲಗೊಂಡಿವೆ.

ಆದರೆ ‘ಇಸ್ರೊ ಕೈಗೊಳ್ಳಲಿರುವ ಯಾನದ ವಿಚಾರದಲ್ಲಿ ಹಾಗಾಗು­ವುದಿಲ್ಲ. ಈ ಉಪಗ್ರಹಕ್ಕೆ ಸಂಬಂಧಿಸಿ­ದಂತೆ ಎಲ್ಲ ಪೂರ್ವಭಾವಿ ಪರೀಕ್ಷೆಗಳನ್ನು ಕೈಗೊಳ್ಳ­ಲಾಗಿದೆ ಎಂದು ಅವರು ಹೇಳಿದರು. ಬೇರೆ ಉಪಗ್ರಹಗಳಿಗೆ ಭೂಮಿ­ಯಿಂದ ಮಾಹಿತಿ ರವಾನಿಸಲು ಕೆಲವೇ ಸೆಕೆಂಡ್‌ಗಳ ಕಾಲಾವಕಾಶ ಸಾಕು. ಆದರೆ ಈ ಉಪಗ್ರಹಕ್ಕೆ ಮಾಹಿತಿ ಕಳುಹಿಸಲು ಅಂದಾಜು 20ರಿಂದ 40 ನಿಮಿಷ ಸಮಯ ಬೇಕು. ಹಾಗಾಗಿ, ಉಪಗ್ರಹದಲ್ಲಿ ಸಮಸ್ಯೆ ಕಂಡುಬಂದ ಸಂದರ್ಭದಲ್ಲಿ, ಅದನ್ನು ನಿವಾರಿಸಿ­ಕೊಳ್ಳುವ ಸೌಲಭ್ಯಗಳನ್ನು ಅದರಲ್ಲೇ ಅಳವಡಿಸಬೇಕಾಗುತ್ತದೆ.ಮಿಥೇನ್‌ ಪರೀಕ್ಷಕ, ಹೈಡ್ರೋಜನ್‌ ಮತ್ತು ಡ್ಯುಟೇ­ರಿಯಂ ಪರೀಕ್ಷಕ ಮತ್ತಿತರ ಸಾಧನಗ­ಳನ್ನು ಉಪಗ್ರಹ ಹೊತ್ತೊಯ್ಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT