ಸಕ್ಕರೆ ಉತ್ಪಾದನೆ ಗುರಿ ಸಾಧನೆ ಕೇಂದ್ರ ಆಹಾರ ಮಂತ್ರಿ ಥಾಮಸ್ ಭರವಸೆ
ನವದೆಹಲಿ, ಡಿ. 2 – ಈ ವರ್ಷದಲ್ಲಿ ಈ ವರೆಗೆ ಸಕ್ಕರೆ ಉತ್ಪಾದನೆ ಹೆಚ್ಚಿರುವುದರ ದೃಷ್ಟಿಯಿಂದ 1963–64ಕ್ಕೆ ಗೊತ್ತು ಮಾಡಿರುವ 33 ಲಕ್ಷ ಟನ್ ಸಕ್ಕರೆ ಉತ್ಪಾದನೆಯ ಗುರಿ ಮುಟ್ಟುವುದು ಸಾಧ್ಯವಾಗುವುದೆಂಬ ಭರವಸೆ ಮೂಡಿದೆ ಎಂದು ಕೇಂದ್ರ ಆಹಾರ ಶಾಖೆಯ ಸ್ಟೇಟ್ ಸಚಿವ ಶ್ರೀ ಎ. ಎಂ. ಥಾಮಸ್ ಇಂದು ಲೋಕಸಭೆಯಲ್ಲಿ ತಿಳಿಸಿದರು.
ಇದೇ ಅಧಿವೇಶನದಲ್ಲಿ ರಾಜ್ಯಕ್ಕೆ ‘ಕರ್ನಾಟಕ’ ಹೆಸರಿಡಲು ಒತ್ತಾಯ
ಬೆಂಗಳೂರು, ಡಿ. 2– ವಿಧಾನ ಸಭೆಯ ಪ್ರಚಲಿತ ಅಧಿವೇಶನದಲ್ಲೇ, ರಾಜ್ಯಕ್ಕೆ ‘ಕರ್ನಾಟಕ’ ವೆಂದು ಹೆಸರಿಡುವ ನಿರ್ಣಯ ಮಾಡಬೇಕೆಂದು ನಿನ್ನೆ ಮಾಗಡಿ ರಸ್ತೆಯಲ್ಲಿ ನಡೆದ ಕನ್ನಡ ಚಳವಳಿಯ ಬಹಿರಂಗ ಸಭೆಯು ಒತ್ತಾಯ ಮಾಡಿದೆ. ವಿಧಾನ ಸಭಾ ಸದಸ್ಯ ಶ್ರೀ ಬಿ. ಭಾಸ್ಕರ್ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಹುಕ್ಕೇರಿಕರ್ ಅವರ ನಿಧನ
ಹುಬ್ಬಳ್ಳಿ, ಡಿ. 2– ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರೂ, ಮಾಜಿ ಮುಂಬೈ ರಾಜ್ಯದ ವಿಧಾನ ಪರಿಷತ್ ಅಧ್ಯಕ್ಷರೂ ಆಗಿದ್ದ ಶ್ರೀ ಆರ್. ಎಸ್. ಹುಕ್ಕೇರಿಕರ್ ಅವರು ತಮ್ಮ 70ನೆಯ ವಯಸ್ಸಿನಲ್ಲಿ ಡಿಸೆಂಬರ್ ಒಂದರಂದು ರಾತ್ರಿ ಒಂದು ಗಂಟೆಗೆ ಧಾರವಾಡದಲ್ಲಿ ನಿಧನರಾದರು. ಶ್ರೀಯುತರು ಹಲವು ತಿಂಗಳಿಂದ ಹೃದಯರೋಗದಿಂದ ನರಳುತ್ತಿದ್ದರು.