ಪೋರ್ಟ್ ಆಫ್ ಸ್ಪೇನ್ (ಪಿಟಿಐ ) : ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಭಾರತ ತಂಡವು ಮಂಗಳವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಸತತ ಎರಡು ಪಂದ್ಯಗಳಲ್ಲಿ ಸೋಲುಂಡ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ತನ್ನ ಮೂರನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಮರಳಿ ಆತ್ಮವಿಶ್ವಾಸ ಪಡೆದುಕೊಂಡಿದೆ.
ಆದರೆ ಭಾನುವಾರದ ಲಂಕಾ ಮತ್ತು ವಿಂಡೀಸ್ ಪಂದ್ಯ ಮಳೆಯ ಕಾರಣ 20ನೇ ಓವರ್ ಬಳಿಕ ಸೋಮವಾರಕ್ಕೆ ಮುಂದೂಡಲ್ಪಟ್ಟಿದ್ದು ಇಂದು ಪಂದ್ಯ ಮುಂದುವರಿಯಲಿದೆ. ಹೀಗಾಗಿ ಫೈನಲ್ ಪ್ರವೇಶಕ್ಕೆ ಹೇಗೆ ರಣತಂತ್ರ ರೂಪಿಸಬೇಕು ಎಂದು ನಿರ್ಧರಿಸಲು ಕೊಹ್ಲಿ ತಂಡಕ್ಕೆ ಸೋಮವಾರ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಪಂದ್ಯದ ಫಲಿತಾಂಶಕ್ಕಾಗಿ ಕಾಯಲೇಬೇಕಾಗಿದೆ.
ಮಳೆ ಸುರಿದ ಪರಿಣಾಮ ಭಾನುವಾರದ ಪಂದ್ಯ ಸೋಮವಾರಕ್ಕೆ ಮುಂದೂಡಿದ್ದು, ಶ್ರೀಲಂಕನ್ನರಿಗೆ ಮಂಗಳವಾರ ಭಾರತದ ವಿರುದ್ಧ ವಿಶ್ರಾಂತಿಯೇ ಇಲ್ಲದಂತೆ ಆಡಬೇಕಾದ ಅನಿವಾರ್ಯತೆ ತಂದಿತ್ತಿದೆ.
ಒಂದೆಡೆ ಸರಣಿಯಲ್ಲಿ ಈ ಮೊದಲು ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಲಂಕಾ ಪಡೆ 161 ರನ್ಗಳ ಭಾರೀ ಅಂತರದಿಂದ ಭಾರತ ತಂಡವನ್ನು ಮಣಿಸಿದ್ದರು. ಇತ್ತ ಭಾರತ ತಂಡವು ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ 102 ರನ್ಗಳ ಭರ್ಜರಿ ಜಯ ಗಳಿಸುವ ಮೂಲಕ ಆತ್ಮವಿಶ್ವಾಸ ಗಳಿಸಿಕೊಂಡಿದೆ.
ಹೀಗಾಗಿ ಭಾರತ ಮತ್ತು ಶ್ರೀಲಂಕಾ ನಡುವಿನ ಮಂಗಳವಾರದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸದಿದ್ದರೆ ಉತ್ತಮ ಪೈಪೋಟಿ ನಿರೀಕ್ಷಿಸಲಾಗಿದೆ.