ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಧರ್ಮಪ್ರಾಂತ್ಯದ ಸಾಮಾಜಿಕ ಕೊಡುಗೆ ಅಪಾರ

Last Updated 13 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ಮಂಗಳೂರು: `ಇಡೀ ಭಾರತದಲ್ಲೇ ಮಂಗಳೂರು ಧರ್ಮಪ್ರಾಂತ್ಯದ ಸಾಮಾಜಿಕ ಕೊಡುಗೆ ಅಪಾರ~ ಎಂದು ಕೇಂದ್ರದ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

ಮಂಗಳೂರು ಧರ್ಮಪ್ರಾಂತ್ಯ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ ಶತಮಾನೋತ್ತರ ಬೆಳ್ಳಿ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

`ಮಂಗಳೂರು ಧರ್ಮಪ್ರಾಂತ್ಯ ಅತ್ಯುತ್ತಮ ಬಿಷಪ್‌ಗಳನ್ನು ನೀಡಿದೆ. ದೇಶದ ಬಹುತೇಕ ಕಡೆಗಳಲ್ಲಿ ಮಂಗಳೂರು ಧರ್ಮಪ್ರಾಂತದ ಬಿಷಪ್‌ಗಳೇ ಇರುವುದು ಇದಕ್ಕೆ ಸಾಕ್ಷಿ. ಒಂದು ಧರ್ಮಪ್ರಾಂತಕ್ಕೆ ಇದಕ್ಕಿಂತಲೂ ದೊಡ್ಡ ಗೌರವ ಬೇರೆ ಬೇಕಿಲ್ಲ~ ಎಂದು ಅವರು ಶ್ಲಾಘಿಸಿದರು.

ಸಾಮಾಜಿಕ ಕಾಳಜಿ: ಮಂಗಳೂರು ಧರ್ಮಪ್ರಾಂತ್ಯದ ಸಾಮಾಜಿಕ ಕಾಳಜಿಯೂ ದೊಡ್ಡದಿದೆ. ಶಿಕ್ಷಣ ಕಾರ್ಯ, ಸಾಕ್ಷರತೆ, ವೈದ್ಯಕೀಯ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ ಕಾಣಿಕೆ ಅಪಾರ. ಕ್ರೈಸ್ತ ಸಮುದಾಯದಲ್ಲೇ ಸೇವಾ ಮನೋಭಾವ ದೊಡ್ದದು ಎಂದು ಅವರು ಹೇಳಿದರು.

 ತಮಗೆ ಕಷ್ಟವಾದರೂ ಸಹಿಸಿ, ಸೇವೆ ಮಾಡಿರುವವರನ್ನು ಕಂಡಿದ್ದೇನೆ. ಈ ನಿಟ್ಟಿನಲ್ಲಿ ಸಮುದಾಯಕ್ಕೆ ಪ್ರೋತ್ಸಾಹದ ಅಗತ್ಯವಿದೆ. ಈ ಕಾರ್ಯಕ್ರಮದ ಮೂಲಕ ಸಮುದಾಯದ ಎಲ್ಲ ಆಶಯಗಳೂ ಈಡೇರಲಿ ಎಂದು ಅವರು ಹರಸಿದರು.

ಇದಕ್ಕೂ ಮೊದಲು ಮಾತನಾಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, 125 ವರ್ಷಗಳಲ್ಲಿ ಧರ್ಮಪ್ರಾಂತ್ಯದ ಸೇವೆ ಅನನ್ಯ. ಇದರ ವ್ಯಾಪ್ತಿಯ 165 ಚರ್ಚ್‌ಗಳ ಮೂಲಕ ಸಾಮಾಜಿಕ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗಿದೆ. ನಾನು ಇದೇ ಜಿಲ್ಲೆಯವನಾಗಿ ಮಂಗಳೂರು ಧರ್ಮಪ್ರಾಂತ್ಯದ ಮೇಲೆ ನನಗೆ ವಿಶೇಷವಾದ ಅಭಿಮಾನವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವೀರಪ್ಪ ಮೊಯಿಲಿ ಚೈತನ್ಯೋದಯ ನೃತ್ಯರೂಪಕದ ಸಿಡಿ ಹಾಗೂ ಪುಸ್ತಕವನ್ನು ಬಿಡುಗಡೆ ಮಾಡಿದರು.

ಮುಂಬೈನ ಆರ್ಚ್ ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಷಿಯಸ್ ಅಧ್ಯಕ್ಷತೆ ವಹಿಸಿದ್ದರು.
ರೋಮ್‌ನ ಸಾವಿಯೋ ಹಾನ್ ಥಾಯ್ ಫಾಯ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಬಿಷಪ್‌ಗಳನ್ನು ಸನ್ಮಾನಿಸಿದರು. ವೆಟಿಕನ್‌ನ ಭಾರತೀಯ ಪ್ರತಿನಿಧಿ ಸಾಲ್ವಟೋರೆ ಪಿನಾಕಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣೆ ಅಂಗವಾಗಿ ನಿರ್ಮಿಸಲಾಗುತ್ತಿರುವ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಶಿಲಾನ್ಯಾಸವನ್ನು ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT