ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ಗೆ ಅಣುಶಕ್ತಿ ಆಯೋಗದ ಅಧ್ಯಕ್ಷ, ಕೇಂದ್ರ ಅಣುಶಕ್ತಿ ಇಲಾಖೆ ಕಾರ್ಯದರ್ಶಿ ಡಾ. ಶ್ರೀಕುಮಾರ್ ಬ್ಯಾನರ್ಜಿ, ನವದೆಹಲಿ ಸಾರ್ವಜನಿಕ ಹಣಕಾಸು ಹಾಗೂ ನೀತಿಯ ರಾಷ್ಟ್ರೀಯ ಸಂಸ್ಥೆ ನಿರ್ದೇಶಕ ಡಾ. ಗೋವಿಂದ ರಾವ್ ಮಾರ್ಪಳ್ಳಿ, ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಪಾತ್ರರಾಗಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಗುರುವಾರ ಬೆಳಿಗ್ಗೆ 11ಕ್ಕೆ ನಡೆಯುವ ವಿವಿಯ 30ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮುಖ್ಯ ಅತಿಥಿಯಾಗಿರುವರು.
ಡಾ. ಶ್ರೀಕುಮಾರ್ ಬ್ಯಾನರ್ಜಿ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ಪ್ರೊ. ಟಿ.ಸಿ.ಶಿವಶಂಕರಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರು ವಿವಿಯಿಂದ ಈವರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ 11 ಮಂದಿಗೆ, ಸಾಹಿತ್ಯ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ಮೂರು ಮಂದಿಗೆ, ಕಾನೂನು ಕ್ಷೇತ್ರದ ಒಬ್ಬರಿಗೆ (ನ್ಯಾ. ಸಂತೋಷ ಹೆಗ್ಡೆ) ಅವರಿಗೆ ಗೌರವ ಡಾಕ್ಟರೇಟ್ ಸಂದಿದೆ. ಈ ಬಾರಿ 14 ಮಂದಿ ಹೆಸರಿತ್ತು.
ಒಮ್ಮತ ನಿರ್ಧಾರದಲ್ಲಿ ಮೂವರಿಗಷ್ಟೇ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಯಿತು ಎಂದು ಅವರು ವಿವರಿಸಿದರು.