ನವದೆಹಲಿ (ಪಿಟಿಐ): ದಟ್ಟ ಮಂಜು ಮುಸುಕಿದ ಕಾರಣ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಹೊರಡಬೇಕಿದ್ದ ಕನಿಷ್ಠ 100 ವಿಮಾನಗಳು ನಿಗದಿತ ಅವಧಿಗಿಂತ ತಡವಾಗಿ ಹೊರಟವು.
ಅಲ್ಲದೆ, ಏಳು ವಿಮಾನಗಳ ಮಾರ್ಗವನ್ನು ಬದಲಾಯಿಸಿದ್ದು 10 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಯಿತು. ವಿಮಾನಗಳು 30 ನಿಮಿಷಗಳಿಂದ ಐದು ಗಂಟೆಗಳ ಕಾಲ ತಡವಾಗಿ ಹಾರಿದವು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಸೋಮವಾರ ರಾತ್ರಿ 10 ಗಂಟೆಯಿಂದ ನಿಲ್ದಾಣದಲ್ಲಿ ಮಂಜು ಮುಸುಕಿದ್ದು, ಮಂಗಳವಾರ ಬೆಳಿಗ್ಗೆಯೂ ಮಂಜು ದಟ್ಟವಾಗಿತ್ತು. ವಿಮಾನಗಳ ಹಾರಾಟ ರದ್ದಾದ್ದರಿಂದ ಪ್ರಯಾಣಿಕರು ತೀವ್ರ ಅನಾನುಕೂಲ ಪರಿಸ್ಥಿತಿ ಎದುರಿಸಬೇಕಾಯಿತು.
ಆದರೆ ವಿಮಾನದ ರನ್ವೇಯಲ್ಲಿ ಬೆಳಕು ಉತ್ತಮವಾಗಿದ್ದು, ವಿಮಾನ ಹೊರಡಲು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಮೂಲಗಳು ಹೇಳಿವೆ. ಮಂಜಿನ ಕಾಣದಿಂದ ಸೋಮವಾರ 140 ವಿಮಾನಗಳು ತಡವಾಗಿ ಹೊರಟಿದ್ದವು.
ತಡವಾದ ರೈಲುಗಳು: ರೈಲು ಪ್ರಯಾಣದ ಮೇಲೂ ಮಂಜು ಪರಿಣಾಮ ಬೀರಿದೆ. 50ಕ್ಕೂ ಹೆಚ್ಚು ರೈಲುಗಳು ನಿಗದಿತ ವೇಳೆಗಿಂತ ತಡವಾಗಿ ಹೊರಟವು.