ಶಿರಸಿ: ಮಲೆನಾಡಿನ ತಿರುಪತಿ ಎಂದೇ ಪ್ರಸಿದ್ಧಿ ಹೊಂದಿರುವ ತಾಲ್ಲೂಕಿನ ಮಂಜುಗುಣಿ ವೆಂಕಟರಮಣ ದೇವರ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ವೆಂಕಟರಮಣ ದೇವರಿಗೆ ಹಣ್ಣು-ಕಾಯಿ ಸೇವೆ ಅರ್ಪಿಸಿದರು.ರಥೋತ್ಸವದ ಅಂಗವಾಗಿ ಪ್ರಾತಃಕಾಲದಲ್ಲಿ ಮಹಾರಥ ಶುದ್ಧಿ, ರಥಪೂಜೆ, ರಥಬಲಿ, ರಥಾರೋಹಣದ ನಂತರ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಬೆಳಿಗ್ಗೆಯಿಂದಲೇ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಜನರು ಸರದಿಯಲ್ಲಿ ನಿಂತು ದೇವರಿಗೆ ಹಣ್ಣು-ಕಾಯಿ, ವಿವಿಧ ಸೇವೆ ಅರ್ಪಿಸಿದರು.