ಜೋಹಾನ್ಸ್ಬರ್ಗ್ (ಐಎಎನ್ಎಸ್): ನೆಲ್ಸನ್ ಮಂಡೇಲಾ ಅವರ ಸಂಸ್ಮರಣಾ ದಿನದ ಅಂಗವಾಗಿ ಮಂಗಳವಾರ ಭಾರಿ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಜನ ಇಲ್ಲಿನ ಸೊವಿಟೊದ ಮೈದಾನದಲ್ಲಿ ಸೇರಿದ್ದರು.
ಮಹಾನ್ ನಾಯಕನ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈದಾನದ ದ್ವಾರ ತೆರೆಯುವ ಮೊದಲೇ ನಸುಕಿನ ಎರಡು ಗಂಟೆಯಿಂದಲೇ ಜನ ಸಾಲುಗಟ್ಟಿದ್ದರು.
ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹಾಗೂ ದಕ್ಷಿಣ ಆಫ್ರಿಕದ ಅಧ್ಯಕ್ಷ, ರಾಷ್ಟ್ರಪತಿ ಪ್ರಣವ್ ಮುಖರ್ಜಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲದೇ ಹಲವು ದೇಶಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪರಸ್ಪರ ಕೈ ಕುಲುಕಿ ಅಭಿನಂದಿಸಿಕೊಂಡಿದ್ದು ಈ ಸಭೆಯ ವಿಶೇಷವಾಗಿತ್ತು. ಸುಮಾರು 80,000 ಜನ ಸೇರಿದ್ದರು.
ಅತ್ಯುನ್ನತ ವ್ಯಕ್ತಿತ್ವದ ಮಂಡೇಲಾ: ಕ್ಷಮಾಗುಣ ಹಾಗೂ ಸಾಮರಸ್ಯ ಇವು ಅತ್ಯುನ್ನತ ವ್ಯಕ್ತಿತ್ವದ ನೆಲ್ಸನ್ ಮಂಡೇಲಾ ಅವರು ಬಿಟ್ಟು ಹೋದ ಆಸ್ತಿ. ಅವರ ಈ ಗುಣಗಳನ್ನು ಜಗತ್ತು ಎಂದಿಗೂ ಗೌರವಿಸುತ್ತದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದರು. ಮಂಡೇಲಾ ಸಂಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಂಡೇಲಾ ಅವರು ತ್ಯಾಗದ ಜೀವನ ನಡೆಸಿದ್ದವರು. ಆ ಮೂಲಕ ತಮ್ಮ ಗುರಿಯನ್ನು ತಲುಪಿದವರು’ ಎಂದು ಸ್ಮರಿಸಿದರು.
ಭಾರತೀಯರು ಮಂಡೇಲಾ ಅವರನ್ನು ಮೆಚ್ಚಿದ್ದಾರೆ. ಭಾರತದ ಕುರಿತು ಅವರಿಗಿರುವ ಸ್ನೇಹ ಮತ್ತು ಪ್ರೀತಿಯನ್ನು ಗೌರವಿಸುತ್ತೇವೆ, ಅವರ ಪರಂಪರೆಯನ್ನು ಮುಂದುವರಿಸುತ್ತೇವೆ ಎಂದರು.
ಆಫ್ರಿಕಾ ಗಾಂಧಿಗೆ ಒಬಾಮ ನಮನ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಸ್ಫೂರ್ತಿಯ ಸೆಲೆ ನೆಲ್ಸನ್ ಮಂಡೇಲಾ ಅವರಿಗೆ ಅಂತಿಮ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಂಡೇಲಾ ಅವರು ಮಹಾನ್ ಪುರುಷ. ಅವರು ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಹಾಗೂ ಅಬ್ರಹಾಂ ಲಿಂಕನ್ ಅವರ ಸಾಲಿಗೆ ಸೇರುತ್ತಾರೆ. ಕಪ್ಪುಜನರ ಸಮಾನತೆಗಾಗಿ ಹೋರಾಡಿ, ನ್ಯಾಯ ದೊರಕಿಸಿ ಕೊಟ್ಟ ಆ ವ್ಯಕ್ತಿತ್ವವನ್ನು ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅವರು ಇಪ್ಪತ್ತನೇ ಶತಮಾನದ ಅದ್ಭುತ ನಾಯಕ’ ಎಂದು ಬಣ್ಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.