ಮಂಡ್ಯ: ಸಾಮೂಹಿಕ ನೃತ್ಯ ಕಾರ್ಯಕ್ರಮದಲ್ಲಿ ಅರಳಿದ ದೇಶಭಕ್ತಿ, `ಜೈಹೋ~, `ಹಮ್ ಹೇ ಹಿಂದೂಸ್ತಾನಿ~, `ವಂದೇ ಮಾತರಂ~ ಗೀತೆಗಳಿಗೆ ಹೆಜ್ಜೆ ಹಾಕಿದ ಮಕ್ಕಳು; ವಿಶಾಲ ಕ್ರೀಡಾಂಣದಲ್ಲಿ ಅರಳಿದ ಭಾರತದ ನಕಾಶೆ.
-ಇವು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದ ಚಿತ್ರಣ.
ನಗರದ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಎನ್ಸಿಸಿ, ಎನ್ಎಸ್ಎಸ್, ಮೀಸಲು ಪೊಲೀಸ್ ಪಡೆಗಳು ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟರೆ, ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳ ಸಮೂಹ ನೀಡಿದ ನೃತ್ಯ ಕಾರ್ಯಕ್ರಮ ಸಭಿಕರ ಮನಗೆದ್ದಿತು.
ತ್ರಿವರ್ಣ ಬಿಂಬಿಸುವ ಕೇಸರಿ, ಬಿಳಿ, ಹಸಿರು ಬಣ್ಣದ ವಸ್ತ್ರಗಳನ್ನು ತೊಟ್ಟ ವಿದ್ಯಾರ್ಥಿನಿಯರು, ವಂದೇ ಮಾತರಂ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕುವ ಜತೆಗೆ, ದುಪ್ಪಟಗಳನ್ನೇ ಗಾಳಿಯಲ್ಲಿ ತೇಲಿಸುತ್ತಾ ಧ್ವಜದ ಕಲ್ಪನೆ ಮೂಡಿಸಿದ್ದು ಹಾಗೂ ವಿಶಾಲ ಕ್ರೀಡಾಂಗಣದಲ್ಲಿ ಭಾರತದ ನಕಾಶೆ ಮೂಡಿಸಿದ್ದು ಗಮನ ಸೆಳೆಯಿತು.
ಅಲ್ಲದೆ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತದ ಕರಾಟೆ ಕಲಿಯುತ್ತಿರುವ ಮಕ್ಕಳು ಕರಾಟೆಯ ಆರಂಭಿಕ ಪಟ್ಟುಗಳನ್ನು ಪ್ರದರ್ಶಿಸಿದರು.
ಕಸರತ್ತಿನ ಭಾಗವಾಗಿ ಸಾಲಾಗಿ ಮಲಗಿದ್ದ ವಿದ್ಯಾರ್ಥಿಗಳ ಹಸ್ತಗಳ ಮೇಲೆ ಬೈಕ್ಹರಿಸಿದ್ದು, ಮಲಗಿದ್ದ ವಿದ್ಯಾರ್ಥಿನಿಯ ಮೇಲೆ ಇಡಲಾದ ಹಲಗೆಯ ಮೇಲೆ ಬೈಕ್ ಏರಿಸಿದ್ದು ಗಮನ ಸೆಳೆಯಿತು.
ಅಭಿನವ ಭಾರತಿ ಶಿಕ್ಷಣ ಸಂಸ್ಥೆಯ ಮಕ್ಕಳು ಈ ಬಾರಿ ಯೋಗ ಪ್ರದರ್ಶಿಸಿ ಗಮನ ಸೆಳೆದರು.
ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಪ್ರತಿಭಾನ್ವಿತರನ್ನು ಉಸ್ತುವಾರಿ ಸಚಿವ ಅಶೋಕ್, ಶಾಸಕರಾದ ಮರಿತಿಬ್ಬೇಗೌಡ, ಎಂ.ಶ್ರೀನಿವಾಸ್, ಅಶ್ವತ್ಥನಾರಾಯಣ ಅವರು ಗೌರವಿಸಿದರು.