ಮಂಡ್ಯ: ಜಿಲ್ಲಾ ಕಾಂಗ್ರೆಸ್ನಲ್ಲಿ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಹಾಗೂ ವಸತಿ ಸಚಿವ ಅಂಬರೀಷ್ ಬೆಂಬಲಿಗರ ನಡುವೆ ನಡೆಯುತ್ತಿದ್ದ ಶೀತಲ ಸಮರ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಮುಂದೆಯೇ ಸ್ಫೋಟಗೊಂಡಿತು.
ಎರಡೂ ಬಣಗಳ ಸದಸ್ಯರ ನಡುವೆ ಅವಾಚ್ಯ ಬೈಗುಳ ವಿನಿಮಯವಾಯಿತ ಲ್ಲದೇ, ಕುರ್ಚಿಗಳನ್ನು ತೂರಾಡಿದ ಘಟನೆಯೂ ನಡೆಯಿತು. ಇದೆಲ್ಲ ವನ್ನೂ ಕೆಪಿಸಿಸಿ ಅಧ್ಯಕ್ಷರು ಮೂಕ ಪ್ರೇಕ್ಷಕನಂತೆ ನೋಡಿದರು.
ಸೆ. 30ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಗರಕ್ಕೆ ಆಗಮಿ ಸಲಿರುವ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್ನಲ್ಲಿ ಕರೆದಿದ್ದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಲು
ಪರಮೇಶ್ವರ್ ಅವರು ಆಗಮಿಸಿದ್ದರು. ಅದಕ್ಕೂ ಮುನ್ನ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು.
ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡುವ ಮುನ್ನ ‘ಸುದ್ದಿಗೋಷ್ಠಿ ಮುಗಿಯುವವರೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರು ಹೊರಗಿರಬೇಕು’ ಎಂದು ಸೂಚಿಸಿದರು. ಆಗ ಎರಡೂ ಬಣಗಳ ನಡುವೆ ಯಾರು ಹೊರ ಹೋಗಬೇಕು ಎಂಬ ಹೊಯ್ದಾಟ ನಡೆಯಿತು.
ಈ ವೇಳೆ ಅಂಬರೀಷ್ ಬಣದ ಅಮರಾವತಿ ಚಂದ್ರಶೇಖರ್, ಬೇಲೂರು ಸೋಮಶೇಖರ್, ಹನಕೆರೆ ಶಶಿ ಮತ್ತಿತರರು, ಕೆಪಿಸಿಸಿ ಸದಸ್ಯ ಟಿ.ಎಸ್.ಸತ್ಯಾನಂದ ಏಕೆ ಇಲ್ಲಿರಬೇಕು? ಹೊರಹೋಗಲಿ ಎಂದು ಕೂಗುತ್ತಾ ಮುನ್ನುಗ್ಗಿ ದರು. ಸತ್ಯಾನಂದ ಅವರೂ ಕೂಗಾಡಲಾರಂಭಿದರು.
ಸಭೆಯಿಂದ ಹೊರ ನಡೆಯುವಂತೆ ಕೆಲವರು ಸತ್ಯಾನಂದ ಅವರನ್ನು ಮುಂದಕ್ಕೆ ತಳ್ಳಿಕೊಂಡು ನಡೆದರು. ಆಗ ತಳ್ಳಾಟ ತೀವ್ರಗೊಂಡಿತು.
ಈ ಹಂತದಲ್ಲಿಯೇ ಕೆಲ ಕಾರ್ಯಕರ್ತರು ಕುರ್ಚಿಗಳನ್ನು ಮೇಲಕ್ಕೆ ತೂರಲಾರಂಭಿಸಿದರು. ಕೂಗಾಟವೂ ಜೋರಾಗಿಯೇ ನಡೆಯಿತು.
ಅದೇ ಸಭಾಂಗಣದಲ್ಲಿದ್ದ ಅಧ್ಯಕ್ಷ ಜಿ. ಪರಮೇಶ್ವರ್ ಮಾತ್ರ ಮೌನವಾಗಿ ಕುಳಿತಿದ್ದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಆತ್ಮಾನಂದ ಸೇರಿದಂತೆ ಯಾರೂ ಕುರ್ಚಿ ಬಿಟ್ಟು ಏಳಲಿಲ್ಲ. ಸತ್ಯಾನಂದ ಹೊರ ನಡೆದ ನಂತರ ಸ್ವಲ್ಪ ಶಾಂತವಾಯಿತು.
‘ಜಾಸ್ತಿ ಉತ್ಸಾಹ’: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್್ ಅವರು ‘ಜಾಸ್ತಿ ಉತ್ಸಾಹ ಇರುವುದರಿಂದ ಈ ರೀತಿ ಗಲಾಟೆಯಾಗಿದೆ. ಕಾಂಗ್ರೆಸ್ನಲ್ಲಿ ಇಂತಹ ಘಟನೆಗಳು ಸಾಮಾನ್ಯ. ಎರಡೂ ಬಣದವರನ್ನು ಕರೆದು ಮಾತನಾಡುತ್ತೇನೆ. ಘಟನೆಗೆ ಕ್ಷಮೆ ಯಾಚಿಸುತ್ತೇನೆ’ ಎಂದರು.
ಸುದ್ದಿಗೋಷ್ಠಿ ಮುಗಿಯುವಾಗ ಆಗಮಿಸಿದ ಸಚಿವ ಅಂಬರೀಷ್, ‘ಜನರನ್ನು ಕರೆ ತರದವರನ್ನು ಒಳಗಿಟ್ಟುಕೊಂಡು ನಗರಸಭೆ ಸದಸ್ಯರು ಹಾಗೂ ಮುಖಂಡರನ್ನು ಹೊರಗಿಟ್ಟಿದ್ದೀರಿ. ಇದು ಸರಿಯೇ?’ ಎಂದು ಪ್ರಶ್ನಿಸಿದರು.
‘ಎಲ್ಲರಿಗೂ ಹೊರ ಹೋಗುವಂತೆ ನಾನೇ ಹೇಳಿದ್ದೆ. ಪಕ್ಷದ ವೇದಿಕೆಯಲ್ಲಿ ಮಾತನಾಡಿ ಬಗೆಹರಿಸೋಣ. ಈಗ ಸುಮ್ಮನಿರಿ’ ಎಂದು ಪರಮೇಶ್ವರ್ ಹೇಳಿದರು. ಇದಕ್ಕೆ ಅಂಬರೀಷ್್ ಸಮ್ಮತಿ ಸೂಚಿಸಿ, ಸುಮ್ಮನಾದರು.
ಸಭೆಗೆ ಗೈರು: ನಂತರ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಗೆ ಸಚಿವ ಅಂಬರೀಷ್್ ಸೇರಿದಂತೆ ಅವರ ಬಣದ ಸದಸ್ಯರು ಗೈರುಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.