ರಾಯಚೂರು: ಹುಬ್ಬಳ್ಳಿ ಭವಾನಿನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದ ಭಕ್ತಾದಿಗಳು ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಯತೀಂದ್ರ ತೀರ್ಥ ಸ್ವಾಮೀಜಿ ಹಾಗೂ ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿಗಳಿಗೆ ಧಾರವಾಡ ‘ಮಿಶ್ರಾ’ ಪೇಡಾದಿಂದ ತುಲಾಭಾರವನ್ನು ಶನಿವಾರ ನೆರವೇರಿಸಿದರು.
ಹುಬ್ಬಳ್ಳಿಯ ಶ್ರೀರಂಗ ಹನುಮಸಾಗರ ಕುಟುಂಬ ವರ್ಗದವರು ಹಾಗೂ ಅರುಣ್ ಅಪರಂಜಿ ಕುಟುಂಬದವರು ಮಂತ್ರಾಲಯ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥರ ಹಾಗೂ ಉತ್ತರಾಧಿಕಾರಿ ಸುಬುಧೇಂದ್ರ ತೀರ್ಥರಿಗೆ 120ರಿಂದ 140 ಕೆ.ಜಿ ಭಾರದ ಧಾರವಾಡ ಮಿಶ್ರಾ ಪೇಡಾ, ಧಾನ್ಯ ಹಾಗೂ ಬೆಲ್ಲದಿಂದ ತುಲಾಭಾರ ಸೇವೆ ನೆರವೇರಿಸಿದರು.
ತುಲಾಭಾರ ಕಾರ್ಯಕ್ರಮದಲ್ಲಿ ಶ್ರೀಮಠದ ಹಿರಿಯ ವಿದ್ವಾಂಸರಾದ ರಾಜಾ ಗಿರಿಯಾಚಾರ್ಯ, ಗುರುಪೀಠದ ಅಧ್ಯಾಪಕರು ಹಾಗೂ ಶ್ರೀಮಠದ ಸಿಬ್ಬಂದಿ ಉಪಸ್ಥಿತರಿದ್ದರು.